ಕೇಂದ್ರ ಸರ್ಕಾರದ ತಪ್ಪು ನಿರ್ಧಾರ

ಕೇಂದ್ರ ಸರ್ಕಾರದ ತಪ್ಪು ನಿರ್ಧಾರಗಳೇ ದೇಶದ ದುಸ್ಥಿತಿಗೆ ಕಾರಣ – ಎಂ ಕೆ ಸೋಮಶೇಖರ್.
ಕೊರೊನಾ ಎಂಬ ಮಹಾಮಾರಿಯಿಂದಾಗಿ ನಮ್ಮ ಭಾರತ ದೇಶ ಇಂದೆಂದೂ ಕಾಣದ ಸಂಕಷ್ಟದ ಪರಿಸ್ಥಿತಿಯಲ್ಲಿ ಸಿಲುಕಿದೆ.ಅದನ್ನು ತಡೆಗಟ್ಟುವಲ್ಲಿ ನಮ್ಮ ಕೇಂದ್ರ ಸರ್ಕಾರವೂ ಸಂಪೂರ್ಣವಾಗಿ ವಿಫಲವಾಗಿದೆ.ಮೊದಲು ವಿದೇಶದಲ್ಲಿ ಈ ಸೋಂಕು ಕಾಣಿಸಿಕೊಂಡು ನಂತರ ನಮ್ಮ ದೇಶಕ್ಕೆ ತಗುಲುವ ಮುಂಚಿತವಾಗಿ ತಡೆಗಟ್ಟಲು ಕ್ರಮ ಕೈಗೊಳ್ಳ ಬಹುದಿತ್ತು.ಆದರೆ ಅದನ್ನೆಲ್ಲಾ ನಿರ್ಲಕ್ಷ್ಯ ಮಾಡಿ ನಮಸ್ತೆ ಟ್ರಂಪ್ ಕಾರ್ಯಕ್ರಮ ರೂಪಿಸಿ ಲಕ್ಷಾಂತರ ಜನರನ್ನು ಸೇರಿಸಿ ಸಮಾರಂಭ ಮಾಡಿ,ಎಲ್ಲಾ ದೇಶದಿಂದಲೂ ನಮ್ಮ ದೇಶಕ್ಕೆ ಬರುತ್ತಿದ್ದರೂ ತಡೆಯದೆ ಮೃದು ಧೋರಣೆ ತಾಳಿ ಇಂದು ದೇಶವೇ ಸಂಕಷ್ಟದಲ್ಲಿ ಸಿಲುಕುವಂತೆ ಮಾಡಿದೆ.ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲೂ ಪ್ರಾಣದ ಹಂಗು ತೊರೆದು ದುಡಿದ ಆರಕ್ಷಕರು,ಆರೋಗ್ಯ ಸಿಬ್ಬಂದಿ,ಪೌರಕಾರ್ಮಿಕರಿಗೆ ಎಷ್ಟು ಅಭಿನಂದಿಸಿದರೂ ಸಾಲದು.ಈ ದೇಶದಲ್ಲಿ ಈ ರಾಜ್ಯದಲ್ಲಿ ಸರ್ಕಾರಗಳು ಸಂಪೂರ್ಣವಾಗಿ ಜನರ ನೋವುಗಳಿಗೆ ಸ್ಪಂದಿಸದಿದ್ದರೂ ಸಾರ್ವಜನಿಕರೂ,ಉದ್ಯಮಿಗಳೂ,ಸಂಘ ಸಂಸ್ಥೆಗಳೂ ಮುಂದೆ ಬಂದು ಹೃದಯ ವೈಶಾಲ್ಯತೆ ಮೆರೆದಿವೆ.ಆ ನಿಟ್ಟಿನಲ್ಲಿ ನಮ್ಮ ದೇಶದ ಜನ ಹೃದಯವಂತರು ಎಂದು ಸಾಬೀತು ಮಾಡಿದ್ದಾರೆ ಎಂದು ಹೇಳಿ ಕಾರ್ಯಕ್ರಮ ರೂಪಿಸಿದ್ದ ಸಂಘಟನೆಗಳಿಗೆ ಅಭಿನಂದಿಸಿದರು.