ಕೋರೋನ: ಕೆಆರ್ ಕ್ಷೇತ್ರದಲ್ಲಿ ಕಳೆದ 6 ದಿನ ದಲ್ಲಿ ಸಾವು ಸಂಭವಿಸಿಲ್ಲ ಶಾಸಕ ರಾಮದಾಸ್

ಮೈಸೂರು,
ಪ್ರಾಥಮಿಕ ಸಂಪರ್ಕದಲ್ಲಿ ಇರುವಂತರನ್ನು ಪರೀಕ್ಷೆಗೆ ಒಳಪಡಿಸುವ ಮತ್ತು ದೂರವಾಣಿ ಸಂಖ್ಯೆಗಳಿರುವ ಮಾಹಿತಿ ಫಲಕವನ್ನು ಅಳವಡಿಸುವ ಕಾರ್ಯಕ್ರಮಕ್ಕೆ ಇಂದು ಶಾಸಕರು ಹಾಗೂ ಮಾಜಿ ಸಚಿವರಾದ ಎಸ್.ಎ.ರಾಮದಾಸ್ ರವರು ಚಾಲನೆ ನೀಡಿದರು.
ಕಳೆದ 6 ದಿನಗಳಲ್ಲಿ ಕೋವಿಡ್-19 ನಿಂದ ಕೃಷ್ಣರಾಜ ಕ್ಷೇತ್ರದ ವ್ಯಾಪ್ತಿಯಲ್ಲಿ ಯಾವುದೇ ಸಾವು ಸಂಭವಿಸದಿರುವುದು ವಿಷಯವಾಗಿದೆ. ಆದರೂ ಜೆ.ಕೆ.ಟೈರ್ ವಿಚಾರವಾಗಿ ಅಲ್ಲಿನ ಕಾರ್ಮಿಕರು ಹೆಚ್ಚಿನ ಸೊಂಕಿತರಾಗಿದ್ದು, ಎಲ್ಲರ ಮನೆಗಳನ್ನು ಭೇಟಿ ಮಾಡಲಾಗುತ್ತಿದೆ. ಕೃಷ್ಣರಾಜ ಕ್ಷೇತ್ರದಲ್ಲಿ 200 ಜನ ಸೊಂಕಿತರಿದ್ದು ದಿನೇ ದಿನೇ ಪ್ರಕರಣಗಳು ಕಡಿಮೆಯಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಸಾರ್ವಜನಿಕರು ಉತ್ತಮ ರೀತಿಯಲ್ಲಿ ಸ್ಪಂದಿಸುತಿದ್ದು ಇಮ್ಯೂನಿಟಿ ಹೆಚ್ಚಿಸುವ ಪ್ರಯತ್ನವನ್ನು ಮನೆಮನೆಗಳಲ್ಲಿ ಮಾಡುತಿದ್ದಾರೆ. ಇಷ್ಟೆಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರೂ ಸಾರ್ವಜನಿಕರು ಹೊರಗಡೆ ಬಂದಾಗ ಸಾಮಾಜಿಕ ಅಂತರ ಕಾಪಾಡಿಕೊಳಬೇಕು, ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಬೇಕು, ಅನಾವಶ್ಯಕವಾಗಿ ಓಡಾಡುವುದು ಬೇಡ ಎನ್ನುವ ಮನವಿಯನ್ನು ನಿರಂತರವಾಗಿ ಮಾಡಲಾಗುತ್ತಿದೆ. ಜೊತೆಯಲ್ಲಿ ಸೊಂಕಿತರನ್ನು ಆಸ್ಪತ್ರೆಗಳಿಗೆ ಸೇರಿಸಲಾಗಿದೆ ಕೆಲವು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುತ್ತಾರೆ. ಸೊಂಕಿತರ ಮನೆಯಲ್ಲಿ ಪ್ರಾಥಮಿಕ ಸಂಪರ್ಕದಲ್ಲಿ ಇದ್ದವರಲ್ಲಿ ರೋಗದ ಲಕ್ಷಣಗಳಿಲ್ಲದೇ ಇದ್ದರು ಅವರನ್ನು ಪ್ರತ್ಯೇಕವಾದಂತಹ ವಾಹನದಲ್ಲಿ ಕರೆದುಕೊಂಡು ಹೋಗಿ ಜೆ.ಪಿ.ನಗರದಲ್ಲಿ ಮತ್ತು ಮಕ್ಕಳಕೂಟದಲ್ಲಿ ಇರುವ ಪರೀಕ್ಷಾಕೇಂದ್ರಗಳಲ್ಲಿ ಪರೀಕ್ಷೆ ಮಾಡುವ ಕಾರ್ಯಕ್ಕೆ ಇಂದು ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಪ್ರಾಥಮಿಕ ಸಂಪರ್ಕದಲ್ಲಿ ಇರುವವರನ್ನು ಪರೀಕ್ಷೆಗೆ ಒಳಪಡಿಸುವ ಕ್ರಮ ಕೈಗೊಳ್ಳಲಾಗುವುದು.
ಕೃಷ್ಣರಾಜ ಕ್ಷೇತ್ರದಲ್ಲಿ ಇರುವ ಎಲ್ಲಾ ಕಂಟೈನ್ ಮೆಂಟ್ ಜೋನ್ ಗಳಲ್ಲಿ ಇರುವ ಮನೆಯವರು ಹೊರಗಡೆ ಓಡಾಡದೆ ಇರುವುದರಿಂದ ಅಗತ್ಯ ವಸ್ತುಗಳ ವ್ಯವಸ್ಥೆಗೆ ಮತ್ತು ಪಾಲಿಕೆ ಅಧಿಕಾರಿಗಳ ದೂರವಾಣಿ ಸಂಖ್ಯೆಯಿರುವ ಮಾಹಿತಿ ಫಲಕವನ್ನು ಅಳವಡಿಸಿ ಕಂಟೈನ್ ಮೆಂಟ್ ಜೋನ್ ನಲ್ಲಿ ಇರುವವರಿಗೆ ಅನುಕೂಲವಾಗುವ ಕಾರ್ಯಕ್ರಮಕ್ಕೆ ವಿಶ್ವೇಶ್ವರ ನಗರದ ವೀವರ್ಸ್ ಕಾಲೋನಿಯಲ್ಲಿ ಚಾಲನೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಶಾಸಕರ ಜೊತೆಯಲ್ಲಿ ನೋಡೆಲ್ ಅಧಿಕಾರಿ ಜಯಸಿಂಹ ರವರು, ಬಿ.ಜೆ.ಪಿ ಕೃಷ್ಣರಾಜ ಕ್ಷೇತ್ರದ ಅಧ್ಯಕ್ಷರಾದ ಎಂ.ವಡಿವೇಲು, ಪ್ರಧಾನ ಕಾರ್ಯದರ್ಶಿ ನಾಗೇಂದ್ರ, ಉಪಾಧ್ಯಕ್ಷ ಶ್ರೀನಿವಾಸ್, ಮುರುಳಿ, ಪಾಂಡು, ಅಕ್ಷಯ್, ವಲಯ ಆಯುಕ್ತರು, ಅಭಿವೃದ್ಧಿ ಅಧಿಕಾರಿಗಳು, ಆರೋಗ್ಯ ಪರಿವೀಕ್ಷಕರುಗಳು, ಕಿರಿಯ ಆರೋಗ್ಯ ಅಧಿಕಾರಿಗಳು ಹಾಗೂ ಮುಂತಾದವರು ಉಪಸ್ಥಿತರಿದ್ದರು.