ಮೈಸೂರು . ಬದಲಾದ ಕಾಲಘಟ್ಟದಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ತನ್ನತ್ತ ಜನಾಕರ್ಷಣೆಯನ್ನು ಹೆಚ್ಚಿಸಿದೆ. ಭೌಗೋಳಿಕ ಹೆಗ್ಗುರುತುಗಳಾದ ರೇಷ್ಮೆ, ವೀಳ್ಯದೆಲೆ ,ಬದನೆಕಾಯಿ,ಶ್ರೀಗಂಧ, ಅರಮನೆ, ಮೈಸೂರು ಪಾಕ್, ಚಾಮುಂಡಿಬೆಟ್ಟ, ಕುಕ್ಕರಹಳ್ಳಿ ಹಾಗೂ ಕಾರಂಜಿಕೆರೆ ಚಾಮರಾಜೇಂದ್ರ ಮೃಗಾಲಯ, ಪಾರಂಪರಿಕ ಕಟ್ಟಡಗಳು, ಯೋಗಾಸನ, ಆಯುರ್ವೇದ, ಧಾರ್ಮಿಕ ಕ್ಷೇತ್ರಗಳು ಸೇರಿದಂತೆ ಹತ್ತಾರು ಬಗೆಯ ವಿಶೇಷತೆಗಳನ್ನು ತನ್ನೊಡಲಲ್ಲಿ ಇಟ್ಟುಕೊಂಡಿದೆ. ಇಂತಹ ನಗರದ ಸ್ವಾಸ್ಥ್ಯ ಕಾಪಾಡಬೇಕಾದ ಹೊಣೆ ಮೈಸೂರಿಗರಾದ ನಮ್ಮೆಲ್ಲರ ಮೇಲಿದೆ. ಅದರ ಸಲುವಾಗಿಯೇ ಧಾರ್ಮಿಕ ಚಿಂತಕರು, ಹಿರಿಯರು, ಕಿರಿಯರು, ಸಂಘಸಂಸ್ಥೆಗಳ ಪ್ರಮುಖರೊಂದಿಗೆ ಚರ್ಚಿಸಿ ರೂಪುಗೊಂಡಿರುವುದೇ ಲಕ್ಷ ವೃಕ್ಷ ಆಂದೋಲನ ಎಂದು ರಾಜೀವ ಸ್ನೇಹ ಬಳಗದ ಹಾಗೂ ಬಿಜೆಪಿ ಮುಖಂಡ, ಸಹಕಾರ ಧುರೀಣ ಹೆಚ್.ವಿ.ರಾಜೀವ್ ತಿಳಿಸಿದರು.
ನಂಜನಗೂಡು ರಸ್ತೆಯಲ್ಲಿರುವ ದಳವಾಯು ಕೆರೆಯ ಬಳಿ ಹಸಿರು ಮೈಸೂರು ಇಲ್ಲಿ ಇಂದು ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ರಾಜೀವ ಸ್ನೇಹ ಬಳಗ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ವತಿಯಿಂದ ಜೂ.5ರಂದು ಪರಿಸರ ದಿನಾಚರಣೆ ಆಚರಿಸಲು ನಿರ್ಧರಿಸಲಾಗಿದೆ. ಈ ಸಂಬಂಧ 15ಸಾವಿರ ಗಿಡಗಳನ್ನು ವಿಶೇಷವಾಗಿ ಬೆಳೆಸಲಾಗಿದೆ ಎಂದರು.
ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಸಂಸ್ಥೆ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಹೆಚ್.ವಿ.ರಾಜೀವ ಸ್ನೇಹ ಬಳಗ ಹಾಗೂ ಸಮಾನ ಮನಸ್ಕರ ಸಂಯುಕ್ತಾಶ್ರಯದಲ್ಲಿ ಲಕ್ಷವೃಕ್ಷ ಆಂದೋಲನ ರೂಪಿಸಲಾಗಿದೆ ಎಂದರು. ಪ್ರತಿವರ್ಷ ಜೂನ್ 5ರಂದು ಚಾಲನೆಗೊಳಿಸಲಿರುವ ಈ ಕಾರ್ಯಕ್ರಮ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ. ಒಟ್ಟು ಏಳು ವರ್ಷಗಳ ಕ್ರಿಯಾಯೋಜನೆ ಒಳಗೊಂಡಿದೆ ಎಂದು ತಿಳಿಸಿದರು.
ಮೈಸೂರು ನಗರಕ್ಕೆ ಸೀಮಿತವಾದಂತೆ ಎಲ್ಲೆಡೆ ಹಸಿರೀಕರಣಗೊಳಿಸುವುದು ನಮ್ಮ ಗುರಿಯಾಗಿದೆ. ಈ ನಿಟ್ಟಿನಲ್ಲಿ ಈ ಹಿಂದಿನ ವರ್ಷಗಳಲ್ಲಿ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಸದ್ಗುರು ಜಗ್ಗಿ ವಾಸುದೇವ್, ಧರ್ಮಸ್ಥಳದ ಧರ್ಮಾಧಿಕಾರೊ ಡಾ,ಡಿ.ವೀರೇಂದ್ರ ಹೆಗ್ಗಡೆ, ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರುಗಳ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ಅನುಷ್ಠಾನಕ್ಕೆ ತರಲಾಗಿದೆ. ಅದರ ಮುಂದುವರಿದ ಭಾಗವಾಗಿ ಈ ಸಾಲಿನಲ್ಲಿ 15ಸಾವಿರ ಸಸಿಗಳನ್ನು ನೆಡಲು ಗುರಿ ಹೊಂದಲಾಗಿದೆ. ಜೂ.5ರಂದು ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಈ ಬಾರಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರ ಮುಂದಾಳತ್ವದಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು.
ಪರಿಸರದ ಬಗ್ಗೆ ಅತಿಯಾದ ಕಾಳಜಿ ಹೊಂದಿರುವ ನಗರದ ಸಂಘಸಂಸ್ಥೆಗಳಿಗೆ ಜೂ.5ರಿಂದ ಸಸಿಗಳನ್ನು ಉಚಿತವಾಗಿ ನೀಡಲಾಗುತ್ತದೆ. ಅರಳಿ, ಬೇವು, ಅತ್ತಿ, ತಮಸ, ಮಹಾಘನಿ, ಬದಾಮಿ, ನೇರಳೆ, ನಿಂಬೆ, ಹಲಸು, ಹೊಂಗೆ, ಶಿವನಿ ಸೇರಿದಂತೆ ಹಲವು ಬಗೆಯ ಗಿಡಗಳನ್ನು ನೀಡಲಾಗುವುದು ಎಂದರು. ಸಸಿಗಳು ಬೇಕಾದಲ್ಲಿ ದೂ.ಸಂ.9731957792 ಸಂಪರ್ಕಿಸಬಹುದೆಂದು ತಿಳಿಸಿದರು