ಶ್ರೀ ಗುರು ಗೀತ – ಭಾಗ 25
ಗುರು ಗೀತೆ ಮಾತೆಯು ಸಿದ್ಧಿ ದಾಯಿನಿ.
ಈ ಗುರುಗೀತೆ ಪಾರಯಣ ಮಾಡಲು ಯಾವ ಸ್ಥಳ ಸೂಕ್ತ ಎಂದು ತಿಳಿದುಕೊಳ್ಳೋಣ.
ತೀರ್ಥ ಕ್ಷೇತ್ರ, ಬಿಲ್ವ ವೃಕ್ಷ, ವಟ ವೃಕ್ಷ, ತುಳಸೀವನ, ನದೀ ತೀರ, ಮಠ, ಗೋಶಾಲೆ, ದೇವಾಲಯ ಮತ್ತು ಸಜ್ಜನರ ಸಮಾವೇಶ ಇಂಥ ಪವಿತ್ರ ನಿರ್ಮಲ ಸ್ಥಳಗಳಲ್ಲಿ ಪಠಿಸುವುದರಿಂದ ಅಪಾರವಾದ ಶೀಘ್ರ ಫಲ ಪ್ರಾಪ್ತಿಯಾಗುತ್ತದೆ.
ಶಾಂತನಾಗಿ ಮೋಕ್ಷ ಕಾಮ್ಯಾರ್ಥ ವಾಗಿ ಗುರು ಗೀತೆ ಜಪಿಸುವುದಾದರೆ ಶ್ವೇತ ವಸ್ತ್ರ ಧರಿಸಿ ಜಪಿಸಬೇಕು, ಇಂದ್ರಿಯಗಳ ವಶೀಕರಣಕ್ಕೆ ಕೆಂಪು ವಸ್ತ್ರ, ತಪ್ಪುಗಳಿಂದ ದೂರಾಗಲು, ಐಶ್ವರ್ಯ ಪ್ರಾಪ್ತಿಗಾಗಿ ಹಳದಿ ವಸ್ತ್ರ ವನ್ನು ಧರಿಸಿ ಜಪಿಸಬೇಕು.
ಗುರು ಗೀತೆ ಜಪಿಸುವವರು ಬೇಗ ಗುರು ಭಕ್ತರಾಗುತ್ತಾರೆ. ಅಂತಹ ಗುರು ಭಕ್ತರನ್ನು ಪಡೆದ ತಂದೆ ತಾಯಿಗಳು, ದೇಶವು ಧನ್ಯವಂತರು.
ಗುರುಗೀತೆಯನ್ನು ಎಲ್ಲರಿಗೂ ಉಪದೇಶಿಸಬಾರದು. ಶ್ರದ್ಧಾ ಭಕ್ತಿಇಲ್ಲದವರೂ, ಮೋಸಗಾರರೂ, ಪತಿತರಿಗೂ ಹೇಳಲು ಯೋಚಿಸಲೂ ಬಾರದು. ಅಂತಹವರಲ್ಲಿ ಬದಲಾವಣೆ ಕಂಡುಬರದ ಹೊರತು ಅಂತಹವರಿಗೆ ಉಪದೇಶಿಸಬಾರದು.
ಅದರಂತೆ ಅರ್ಹರಾದವರಿಗೆ ತಕ್ಷಣ ಉಪದೇಶಿಸಬೇಕು. ಪರಿಪಕ್ವ ಮನಸ್ಸುಳ್ಳವರಿಗೆ ಉಪದೇಶಿಸಬೇಕು.
ಶಿಷ್ಯರ ಹಣವನ್ನು ದೋಚುವ ಗುರುವು ಇರುತ್ತಾರೆ. ಆದರೆ ಚಿತ್ತವನ್ನು ತೆಗೆದುಕೊಳ್ಳುವ ಗುರುವನ್ನು ಆಶ್ರಯಿಸಬೇಕು. ವೇಷ ಭೂಷಣ ದಿಂದ ಗುರುವಾಗೆ ಕಂಡರೂ, ತನ್ನಲ್ಲಿ ತಾನು ಆತ್ಮ ಶಾಂತಿ ಕಂಡುಕೊಳ್ಳದಂತಹವರು ಹೇಗೆ ಗುರುವಾಗಲು ಸಾಧ್ಯ? ಅಂತಹವರನ್ನು ಆಶ್ರಯಿಸಬಾರದು.
ಸರ್ವ ವ್ಯಾಪಕನು, ಪರಮಾತ್ಮ ಸ್ವರೂಪನೂ, ಕ್ಲೇಶ ನಾಶಕನು, ಮನಸ್ಸಿಗೆ ಸಾಕ್ಷಿಯೂ ಆದ ಸಚ್ಚಿದಾನಂದ ಸ್ವರೂಪಿಯಾದ ಸದ್ಗುರು ವಿಗೆ ನಮಸ್ಕಾರಗಳು.
ನಾನೇ ವಿಷ್ಣು, ಸರ್ವವ್ಯಾಪಿ, ಈ ಜಗತ್ತೆಲ್ಲವೂ ನನ್ನಲ್ಲಿಯೇ ಕಲ್ಪಿತವಾಗಿದೆ ಎಂಬ ಸದ್ರೂಪ ಆತ್ಮ ತತ್ವವನ್ನು ಯಾರಿಂದ ಪಡೆಯುತ್ತೇವೆಯೋ ಅಂತಹ ಸಚ್ಚಿದಾನಂದ ಸದ್ಗುರುವಿಗೆ ನಮಸ್ಕಾರಗಳು.
ಇಲ್ಲಿಗೆ ಸ್ಕಾಂದ ಪುರಾಣದ ಉಮಾ ಮಹೇಶ್ವರ ಸಂವಾದದ ಗುರುಗೀತೆಯು ಇಂದಿಗಷ್ಟೆ ಮುಕ್ತಾಯವಾಗುತ್ತದೆ.
ಮುಂದಿನ ಸಂಚಿಕೆಯಲ್ಲಿ ಶಂಕರಾಚಾರ್ಯರು ನಿರ್ಮಿಸಿರುವ ಗುರು ಅಷ್ಟಕದ ಅರ್ಥವನ್ನೂ ನೋಡೋಣ.
ಜೈಗುರುದತ್ತ