ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕಣಗಾಲು ಗ್ರಾಮದ 66/11 ಕೆವಿ ಸಾಮರ್ಥ್ಯದ ಉಪ ವಿದ್ಯುತ್ ಕೇಂದ್ರವನ್ನು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಉದ್ಘಾಟಿಸಿದರು. ಸಂಸದರಾದ ಪ್ರತಾಪ್ ಸಿಂಹ, ಶಾಸಕ ಮಹದೇವ್, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಇದ್ದರು.ಅಭಿವೃದ್ಧಿಗೋಸ್ಕರ ಕ್ಷೇತ್ರಕ್ಕೆ ಸಹಕಾರ ನೀಡುವೆ; ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅಭಯ
- ಕಣಗಾಲು ಗ್ರಾಮದ ಕಾವೇರಿ ನದಿ ಮೂಲದಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸಹಕಾರ ಸಚಿವರಿಂದ ಚಾಲನೆ
ಮೈಸೂರು: ಪಿರಿಯಾಪಟ್ಟಣ ತಾಲೂಕಿನ ಕಣಗಾಲು ಗ್ರಾಮದ ಕಾವೇರಿ ನದಿ ಮೂಲದಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಚಾಲನೆ ನೀಡಿದರು. ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಪಿರಿಯಾಪಟ್ಟಣ ಶಾಸಕ ಕೆ. ಮಹದೇವ್, ಮಾಜಿ ಶಾಸಕ ಬಸವರಾಜು, ಜಿಪಂ ಸಿಇಒ ಪ್ರಶಾಂತ್ ಇದ್ದರು.
ಇದೇ ವೇಳೆ ಸಚಿವರು ಪಂಪುಮನೆ ಹಾಗೂ ಕ್ಲೋರಿನೇಷನ್ ಘಟಕವನ್ನು ಪರಿಶೀಲಿಸಿದರು.
ಬಳಿಕ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಸರ್ಕಾರದ ಯೋಜನೆಗಳ ಬಗ್ಗೆ ಸ್ವತಃ ಶಾಸಕರಾದವರೇ ಓಡಾಡಿದರೆ ಮಾತ್ರ ಬೇಗ ಕೆಲಸಗಳಾಗುತ್ತವೆ. ನೀರಾವರಿ ಸಚಿವರಾದ ರಮೇಶ್ ಜಾರಕಿಹೊಳಿ ಅವರು ಜಿಲ್ಲೆಗೆ ಬಂದಿದ್ದಾರೆ. ಅವರೂ ಕೂಡ ಉತ್ತಮ ಸಹಕಾರ ನೀಡುತ್ತಿದ್ದಾರೆ. ಹಾಗಾಗಿ ಈ ಕ್ಷೇತ್ರದ ಅಭಿವೃದ್ಧಿ ಕೆಲಸಕ್ಕೆ ಬೇಕಾದ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಸಂಸದರಾದ ಪ್ರತಾಪ್ ಸಿಂಹ ಅವರು ಒಳ್ಳೇ ಕೆಲಸಗಾರ. ತಮ್ಮ ಕ್ಷೇತ್ರ ಹಾಗೂ ಮೈಸೂರಿಗೆ ಬೇಕಾದ ಕೆಲಸವನ್ನು ಮಾಡಿಸಿಕೊಂಡು ಬರುತ್ತಿದ್ದಾರೆ. ಇಂತಹ ಸಂಸದರು ಸಿಗುವುದು ಅಪರೂಪ. ಇನ್ನು ಜಿಲ್ಲಾಧಿಕಾರಿ ಸಹಿತ ಎಲ್ಲ ಜನಪ್ರತಿನಿಧಿಗಳು ಕೋವಿಡ್-19 ನಿಯಂತ್ರಣಕ್ಕೆ ಶ್ರಮಿಸಿದ್ದಾರೆ ಎಂದು ಪ್ರಶಂಸಿಸಿದರು.
ಜಿಲ್ಲೆಯಲ್ಲಿ ಕೊರೋನಾ ಸೋಂಕು ಪ್ರಕರಣಗಳು ನಿಯಂತ್ರಣಕ್ಕೆ ಬಂದಿತ್ತು. ಆದರೆ, ಪುನಃ ಸೋಂಕು ಕಾಣಿಸಿಕೊಂಡಿರುವುದು ಮಹಾರಾಷ್ಟ್ರ ಸೇರಿದಂತೆ ಬೇರೆ ರಾಜ್ಯದಿಂದ ಬಂದವರಿಂದ. ಹೀಗಾಗಿ ಅಂಥವರನ್ನು ಕ್ವಾರಂಟೇನ್ ಮಾಡಲಾಗಿದೆ. ಅಲ್ಲದೆ, ಅಲ್ಲಿಂದ ಬರುವವರಲ್ಲೇ ಹೆಚ್ಚು ಸೋಂಕು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿ, ಹೊರ ರಾಜ್ಯಗಳಿಂದ ಬರುವವರಿಗೆ ತಾತ್ಕಾಲಿಕವಾಗಿ ತಡೆ ನೀಡಿ ಆದೇಶಿಸಲಾಗಿದೆ ಎಂದು ತಿಳಿಸಿದರು.
ಮೇ 31ಕ್ಕೆ ಲಾಕ್ ಡೌನ್ ಸಂಪೂರ್ಣ ಸಡಿಲಿಕೆ ನಿರ್ಧಾರ
ಮೇ 31ರ ಬಳಿಕ ದೇವಸ್ಥಾನ, ಮಾಲ್ ಗಳ ಪ್ರಾರಂಭ ಸೇರಿದಂತೆ ಇನ್ನಿತರ ಚಟುವಟಿಕೆ ಬಗ್ಗೆ ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡ ನಂತರ ರಾಜ್ಯ ಸರ್ಕಾರವು ಯಾವುದಕ್ಕೆ ಅನುಮತಿ ನೀಡಬೇಕು ಎಂಬುದನ್ನು ನಿರ್ಧರಿಸುತ್ತದೆ ಎಂದು ಸಚಿವರು ತಿಳಿಸಿದರು.
ಸಂಸದರಾದ ಪ್ರತಾಪ್ ಸಿಂಹ ಮಾತನಾಡಿ, ಎಲ್ಲರ ಮನವಿಗೆ ಸ್ಪಂದಿಸುವ ಗುಣವನ್ನು ಉಸ್ತುವಾರಿ ಸಚಿವರು ಹೊಂದಿದ್ದಾರೆ. ಅವರ ಅಪಾರ ಕಾಳಜಿ ಹೊಂದಿದ್ದಾರೆ ಎಂದರು.
ಈ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಸುತ್ತಮುತ್ತಲಿನ 15 ಗ್ರಾಮಗಳಿಗೆ ಅನುಕೂಲವಾಗುತ್ತಿದೆ. ಇದಕ್ಕೆ ಕಾರಣರಾದ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದರು.
ಶಾಸಕರಾದ ಮಹದೇವ್ ಮಾತನಾಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಾದರೆ ಮಾತ್ರ ಕಾರ್ಯಕ್ರಮಕ್ಕೆ ಬರುವುದಾಗಿ ಸಚಿವರು ಹೇಳಿದ್ದರು. ಈ ನಿಟ್ಟಿನಲ್ಲಿ ಇಲ್ಲಿ ಮಾಸ್ಕ್ ಹಾಗೂ ಸ್ಯಾನಿಟೈಸೇಶನ್ ಹಾಕಿಕೊಂಡು ಅಂತರ ಕಾಪಾಡಿಕೊಂಡಿರುವುದಕ್ಕೆ ಧನ್ಯವಾದ. ಕುಡಿಯುವ ನೀರಿನ ಯೋಜನೆ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವರ ಬಳಿ ಹೇಳಿಕೊಳ್ಳುವಂತೆ ಬೇರೆ ಪಕ್ಷದ ಶಾಸಕನಾದರೂ ಸಹ ನನಗೆ ಹೇಳಿಕೊಟ್ಟಿದ್ದಲ್ಲದೆ, ನಮ್ಮ ಪರವಾಗಿ ಸಚಿವರಾದ ಈಶ್ವರಪ್ಪ ಅವರ ಗಮನಕ್ಕೆ ತಂದು ಕೆಲಸ ಮಾಡಿಸಿಕೊಟ್ಟಿಸಿದ್ದಾರೆ. ಅವರಿಗೆ ಅಧಿಕಾರದ ಅಹಂ ಆಗಲೀ, ಕೋಪವಾಗಲೀ ಇಲ್ಲದೆ ಸಾವಧಾನವಾಗಿ ಎಲ್ಲರ ಸಮಸ್ಯೆಯನ್ನು ಆಲಿಸುತ್ತಾರೆ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ನಿಮ್ಮ ಮಾರ್ಗದರ್ಶನದಲ್ಲಿ ಸಂಸದರು ಹಾಗೂ ಶಾಸಕನಾದ ನಾನು ಸೇರಿ ಈ ತಾಲೂಕಿನ ಅಭಿವೃದ್ಧಿಗೋಸ್ಕರ ದುಡಿಯಲು ಅನುಕೂಲ ಮಾಡಿಕೊಡಬೇಕು ಎಂದು ಶಾಸಕ ಮಹದೇವ್ ತಿಳಿಸಿದರು.
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕಣಗಾಲು ಗ್ರಾಮದ 66/11 ಕೆವಿ ಸಾಮರ್ಥ್ಯದ ಉಪ ವಿದ್ಯುತ್ ಕೇಂದ್ರವನ್ನು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಉದ್ಘಾಟಿಸಿದರು. ಸಂಸದರಾದ ಪ್ರತಾಪ್ ಸಿಂಹ, ಶಾಸಕ ಮಹದೇವ್, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಇದ್ದರು.
ಪಿರಿಯಾಪಟ್ಟಣ ತಾಲೂಕು ದೊಡ್ಡಹರವೆ ಸೇರಿದಂತೆ 19 ಟಿಬೆಟಿಯನ್ ಕ್ಯಾಂಪ್ ಗಳಿಗೆ ಕುಡಿಯುವ ನೀರಿನ ಯೋಜನೆಯನ್ನು
ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಉದ್ಘಾಟಿಸಿದರು. ಸಂಸದರಾದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್, ಶಾಸಕರಾದ ಮಹದೇವ್ ಹಾಗೂ ಮಾಜಿ ಶಾಸಕ ಬಸವರಾಜು ಇತರರು ಇದ್ದರು. ಈ ವೇಳೆ ಟಿಬೆಟಿಯನ್ ಸಾಂಪ್ರದಾಯದ ಬಿಳಿ ಶಾಲನ್ನು ಟಿಬೆಟಿಯನ್ ಧರ್ಮಗುರುಗಳು ಸಚಿವರಿಗೆ ಹೊದಿಸಿ ಸ್ವಾಗತ ಕೋರಿದರು.