ಮೈಸೂರುAPMC ಅಭಿವೃದ್ಧಿಗೆ 4 ಕೋಟಿ ರೂ ಮಂಜೂರು

ಭೋಜನ ಮಂದಿರಕ್ಕೆ ತಾತ್ಕಾಲಿಕ ಜಾಗ

  • ಉಸ್ತುವಾರಿ ಸಚಿವ ಸೋಮಶೇಖರ್ ಹೇಳಿಕೆ
  • ಸೇವಾ ಗುಣಮಟ್ಟ ಗಮನಿಸಿ ಕಾಯಂ ಜಾಗ ನೀಡುವ ಬಗ್ಗೆ ನಿರ್ಧಾರ

ಮೈಸೂರು: ಮೈಸೂರು ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಮೈಸೂರು ಧಾನ್ಯ ವರ್ತಕರ ಸಂಘದ ವತಿಯಿಂದ ರೈತರಗಾಗಿ ಪ್ರಾರಂಭಿಸಲಾಗುತ್ತಿರುವ ಭೋಜನ ಮಂದಿರ ವನ್ನು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹಾಗೂ ನಗರಾಭಿವೃದ್ಧಿ ಸಚಿವರಾದ ಬಿ.ಎ.ಬಸವರಾಜು ಉದ್ಘಾಟಿಸಿದರು. ಶಾಸಕರಾದ ಜಿ.ಟಿ.ದೇವೇಗೌಡ ಇದ್ದರು.

ಬಳಿಕ ರೈತರ ಕ್ಯಾಂಟೀನ್ ಆದ ಭೋಜನ ಮಂದಿರವನ್ನು ಪರಿಶೀಲಿಸಿದ ಸಚಿವದ್ವಯರು, ಆಹಾರ ತಯಾರಿಕೆಯ ಶುಚಿತ್ವವನ್ನು ಗಮನಿಸಿದರು. ರೈತರಿಗೆ ಸ್ವತಃ ಉಪಾಹಾರ ಬಡಿಸಿದರು.

ಎಪಿಎಂಸಿ ಭೇಟಿ ವೇಳೆ ಕೋಲ್ಡ್ ಸ್ಟೋರೇಜ್ ಗಾಗಿ ಅನುಮತಿ ಕೋರಲಾಗಿತ್ತು. ಈಗ ಅದಕ್ಕೂ ಈಗ ಅನುಮತಿ ನೀಡಲಾಗಿದೆ. ಎಪಿಎಂಸಿ ಅಭಿವೃದ್ಧಿಗೆ ಅನುದಾನ ಬೇಕೆಂದು ಸ್ಥಳೀಯ ಶಾಸಕರಾದಿಯಾಗಿ ಹಲವರು ಕೇಳಿಕೊಂಡಿದ್ದರು. ಅದಕ್ಕೋಸ್ಕರ ಸರ್ಕಾರದಿಂದ 4 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ. ಇನ್ನು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಆರಂಭಿಸಲಾಗಿರುವ ಕ್ಯಾಂಟೀನ್ ಗಾಗಿ ತಾತ್ಕಾಲಿಕವಾಗಿ ಜಾಗ ನೀಡಲು ಎಪಿಎಂಸಿ ನಿರ್ದೇಶಕರಿಗೆ ಸೂಚನೆ ನೀಡಿದ್ದೇನೆ. ಇಲ್ಲಿ ಕ್ಯಾಂಟೀನ್ ನ ನಿರ್ವಹಣೆ, ಗುಣಮಟ್ಟ ಹಾಗೂ ರೈತರೆಲ್ಲರಿಗೂ ಆಹಾರ ಸಿಗುತ್ತದೆಯೇ ಎಂಬ ಅಂಶವನ್ನು ಕೆಲ ಸಮಯಗಳ ಕಾಲ ನಿಗಾ ವಹಿಸಲಾಗುತ್ತದೆ. ಅವರ ಸೇವೆ ತೃಪ್ತಿಕರವಾಗಿದ್ದರೆ ಜಾಗದ ಖಾಯಂ ಮಂಜೂರಾತಿಗೆ ನಿರ್ಧರಿಸಲಾಗುವುದು ಎಂದು ಸಚಿವ ಸೋಮಶೇಖರ್ ತಿಳಿಸಿದರಯ.

ಝೋಗೆ ಸುಧಾಮೂರ್ತಿ ಅವರಿಂದ 20 ಲಕ್ಷ

ಮೃಗಾಲಯಕ್ಕೆ ದೇಣಿಗೆ ನೀಡುವ ಸಂಬಂಧ ಇನ್ಫೋಸಿಸ್ ಫೌಂಡೇಶನ್ ನ ಸುಧಾಮೂರ್ತಿ ಅವರಿಗೆ ಪತ್ರ ಬರೆದಿದ್ದೇನೆ. ಅವರೂ ಸಹ ಅದಕ್ಕೆ ಪ್ರತಿಯಾಗಿ ಪತ್ರ ಬರೆದು 20 ಲಕ್ಷ ರೂಪಾಯಿ ಕೊಡುವುದಾಗಿ ಹೇಳಿದ್ದಾರೆ. ಜೊತೆಗೆ ಅನಿವಾಸಿ ಭಾರತೀಯರು ಹಾಗೂ ಅಕ್ಕ ಸಂಸ್ಥೆಗೂ ಕೇಳಿಕೊಂಡಿದ್ದು, ಅವರಿಂದಲೂ ಕೊಡುಗೆ ಸಿಗುವ ನಿರೀಕ್ಷೆ ಇದೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.