ಮೈಸೂರು ಜಿಲ್ಲಾ ವಿಶ್ವಕರ್ಮ ಯುವ ಜಾಗೃತಿ ಅಧ್ಯಕ್ಷನೆಂದು ಕೆ.ಕೆಂಡಗಣ್ಣ ಎಂಬವರು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯಾಧ್ಯಕ್ಷರು, ಬಿಜೆಪಿ ಉಪಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಕೆ.ಪಿ.ನಂಜುಂಡಿ ವಿಶ್ವಕರ್ಮರ ಕುರಿತು 30/5/2020ರಂದು ಸುದ್ದಿಗೋಷ್ಠಿಯಲ್ಲಿ ಅವಹೇಳನಕಾರಿಯಾಗಿ ಮಾತನಾಡಿ ನಿಂದಿಸಿದ್ದು ಅವರು ರಾಜ್ಯದ ವಿಶ್ವಕರ್ಮ ಸಮಾಜಕ್ಕೆ ಕ್ಷಮೆಯಾಚಿಸದಿದ್ದರೆ ಸಮಾಜದ ಜನರು ಸಿಡಿದೆದ್ದು ಪ್ರತಿಭಟಿಸಬೇಕಾಗುತ್ತದೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯ ಕಾರ್ಯದರ್ಶಿ ಶಿವಬಸವಾಚಾರಿ ಎಚ್ಚರಿಸಿದರು.
ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೆ.ಪಿ ನಂಜುಂಡಿ ಅವರು ಹಲವಾರು ಜನಪರ ಕಾರ್ಯಗಳನ್ನು ನಡೆಸಿದ್ದು, ವಿಶ್ವಕರ್ಮ ಪಂಚ ಕಸುಬುಗಳ ಉಳಿವಿಗಾಗಿ ವಿಶ್ವಕರ್ಮ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕೆಂದು ಸಮಾವೇಶಗಳಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಬಂದು ವಿಶ್ವಕರ್ಮ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲು ಯಶಸ್ವಿಯಾಗಿದ್ದಾರೆ. ಹಾಸನದಿಂದ ಬೇಲೂರಿನ ಚೆನ್ನಕೇಶವ ದೇವಾಲಯದವರೆಗೂ ಪಾದಯಾತ್ರೆ ನಡೆಸಿ ಅಮರ ಶಿಲ್ಪಿ ಜಕಣಾಚಾರಿಯವರ ಸಂಸ್ಮರಣ ದಿನವನ್ನು ಪ್ರತಿವರ್ಷ ಜನವರಿ ಒಂದರಂದು ಸರ್ಕಾರದ ವತಿಯಿಂದ ಆಚರಿಸಲು ಯಶಸ್ವಿಯಾಗಿದ್ದಾರೆ. ಉಳಿದ ಬೇಡಿಕೆಗಳನ್ನು ಈಡೇರಿಸಲು ರಾಜಕೀಯ ಸ್ಥಾನಮಾನ ಅಗತ್ಯವೆಂದು ಮನಗಂಡು ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ಬಿ.ಎಸ್.ಯಡಿಯೂರಪ್ಪನವರ ಆದೇಶದ ಮೇರೆಗೆರಾಜ್ಯ ಬಿಜೆಪಿ ಪಕ್ಷ ಸೇರ್ಪಡೆಗೊಂಡ ಸ್ವಲ್ಪ ದಿನದಲ್ಲೇ ಇವರು ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ನೇಮಕಗೊಂಡು ನಂತರದ ದಿನಗಳಲ್ಲಿ ವಿಧಾನ ಪರಿಷತ್ ಸದಸ್ಯರಾಗಿಯೂ ಸಹ ನೇಮಕವಾಗಿದ್ದಾರೆ. ಈ ಒಂದು ನಿಟ್ಟಿನಲ್ಲಿ ವಿಧಾನ ಪರಿಷತ್ ನ್ನು ಪ್ರವೇಶಿಸಿ ವಿಶ್ವಕರ್ಮ ಸಮಾಜದ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಧ್ವನಿಯಾಗಿ ಕೆ.ಪಿ.ನಂಜುಂಡಿ ವಿಶ್ವಕರ್ಮ ಅವರನ್ನು ಅವಹೇಳನಕಾರಿಯಾಗಿ ನಿಂದಿಸಿ ರಾಜೀನಾಮೆ ಕೊಡುವಂತೆ ಹೇಳಿಕೆ ನೀಡಿರುವುದು ಶುದ್ಧ ಮೂರ್ಖತನದಿಂದ ಕೂಡಿದೆ. ಸಮಾಜದ ಸಂಘಟನೆಗೆ ಕಂಟಕವನ್ನು ಉಂಟು ಮಾಡುತ್ತಿರುವ ಇವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ನಗರ ಪೊಲೀಸ್ ಆಯುಕ್ತರಿಗೂ ದೂರು ಸಲ್ಲಿಸಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸೌಭಾಗ್ಯಮ್ಮ, ಲೋಕೇಶಾಚಾರಿ, ಎ.ಎನ್.ಸಿದ್ದಪ್ಪಾಜಿ ಮತ್ತಿತತರಿದ್ದರು.