ಆಮ್ ಆದ್ಮಿ ಪಾರ್ಟಿ ಕಾರ್ಯಕಾರಿ ಸಮಿತಿಯ ಪುನಃರಚನೆ
ಇತ್ತೀಚೆಗೆ ನೇಮಕಗೊಂಡ ಆಮ್ ಆದ್ಮಿ ಪಾರ್ಟಿಯ ಮೈಸೂರು ಜಿಲ್ಲಾ ಅಧ್ಯಕ್ಷೆ ಶ್ರೀಮತಿ ಮಾಲವಿಕ ಗುಬ್ಬಿವಾಣಿ ಅವರು ಪಕ್ಷದ ಜಿಲ್ಲಾ ಕಾರ್ಯಕಾರಿ ಸಮಿತಿಯನ್ನು ಕೆಳಕಂಡಂತೆ ಪುನಃರಚನೆ ಮಾಡಿರುತ್ತಾರೆ.
ಮಹಿಳಾ ಘಟಕದ ಮುಖ್ಯಸ್ಥೆಯಾಗಿ ಶ್ರೀಮತಿ ಉಷಾ ಸಂಪತ್ ಕುಮಾರ್ ಅವರನ್ನು ನೇಮಿಸಲಾಗಿದೆ. 2013ರಿಂದ ಪಕ್ಷದ ಸ್ವಯಂಸೇವಕಿಯಾಗಿರುವ ಇವರು, ಇಂಗ್ಲಿಷ್ ಸಾಹಿತ್ಯ ಮತ್ತು ಶಿಕ್ಷಣ ಪದವೀಧರೆಯಾಗಿ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕಿಯಾಗಿ, ನಂತರ ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿಯೂ ಕಾರ್ಯ ನಿರ್ವಹಿಸಿರುತ್ತಾರೆ. ಮಹಿಳೆಯರ ಸಬಲೀಕರಣಕ್ಕೆಂದು ಪ್ರಾರಂಭಗೊಂಡ ಸಂಸ್ಥೆ “ಅವಳ ಹೆಜ್ಜೆ”ಯಲ್ಲಿ ಬಾಹ್ಯಸಂಪರ್ಕ (ಔಟ್ ರೀಚ್) ನಿರ್ದೇಶಕಿಯಾಗಿಯೂ ಕೆಲಸ ಮಾಡುತ್ತಿದ್ದಾರೆ.
ಮೈಸೂರು ಜಿಲ್ಲೆಯ ಬಾಹ್ಯಸಂಪರ್ಕ ಸಂಯೋಜಕರಾಗಿ ಶ್ರೀ ರೇಣುಕಾಪ್ರಸಾದ್ ಅವರನ್ನು ನೇಮಿಸಲಾಗಿದೆ. ತಮ್ಮನ್ನು ತಾವು ಜನಸಾಮಾನ್ಯ ಎಂದು ಪರಿಚಯಿಸಿಕೊಳ್ಳುವ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಬಿಸಿನೆಸ್ ಮ್ಯಾನೇಜ್ಮೆಂಟ್ ವ್ಯಾಸಂಗ ಮಾಡಿ, ತೋಟ ಮತ್ತು ಕಾಫಿ ಪ್ಲಾಂಟೇಷನ್ ನಿರ್ವಹಿಸಿರುತ್ತಾರೆ. ನಂತರ ಕೆಲ ಕಾಲ ಬ್ಯಾಂಕ್ ನೌಕರರಾಗಿ ಹಾಗೂ ಖಾಸಗಿ ಕಾನೂನು ಸಂಸ್ಥೆಯಲ್ಲಿ ಕಾನೂನು ಸಹಾಯಕರಾಗಿ 2 ವರ್ಷ ಕೆಲಸ ಮಾಡಿರುತ್ತಾರೆ. ತದ ನಂತರ ಔದ್ಯೋಗಿಕ ಅಭಿವೃದ್ಧಿ ನಿಗಮ (ಐಡಿಸಿ) ಸೇರಿ ರಾಜ್ಯದ ಔದ್ಯೋಗಿಕ ಪ್ರೋತ್ಸಾಹ ಕೆಲಸದಲ್ಲಿ ಸಕ್ರಿಯವಾಗಿ ಭಾಗಿಯಾಗಿ, ಔದ್ಯೋಗಿಕ ತಾಣಗಳ ನಿರ್ವಹಣೆ ಮತ್ತು ಸಣ್ಣ ಉದ್ದಿಮೆಗಳಿಗೆ ಅವಶ್ಯಕ ಕಚ್ಚಾ ವಸ್ತುಗಳ ಸರಬರಾಜು ನಿರ್ವಹಣೆ ಮಾಡಿರುತ್ತಾರೆ. 2012ರಲ್ಲಿ ಕೆಲಸ ಬಿಟ್ಟು ರೈತರ ಸಮಸ್ಯೆ, ಯುವ ಪ್ರೋತ್ಸಾಹ ಮುಂತಾದ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು ಮೈಸೂರು ನಿವಾಸಿ.
ಶ್ರೀ ಜಿ ಆರ್ ವಿದ್ಯಾರಣ್ಯ ಅವರನ್ನು ಮಾಧ್ಯಮ ಸಂಯೋಜಕರಾಗಿ ನೇಮಿಸಲಾಗಿದೆ. ಇವರು ನಿವೃತ್ತ ನೌಕಾ ಸಂವಹನ, ರೇಡಾರ್ ಮತ್ತು ಗಣಕಯಂತ್ರ ತಜ್ಞರು. ಮಾಹಿತಿ ಹಕ್ಕು ಕಾಯಿದೆ ಹಾಗೂ ಸಾಮಾಜಿಕ ಅಭಿವೃದ್ಧಿ ಕಾರ್ಯಕರ್ತರು. ಅನೇಕ ಸಂಘ-ಸಂಸ್ಥೆಗಳಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಜೀವನಾವಶ್ಯಕ ಕಲೆ ಮತ್ತು ಉತ್ತಮ ನಾಗರಿಕತೆಯ ಬೋಧನೆ ಮಾಡಿರುತ್ತಾರೆ. ಇದೇ ವಿಷಯದ ಮೇಲೆ ಹಲವಾರು ಲೇಖನಗಳನ್ನೂ ಬರೆದಿರುತ್ತಾರೆ. 2012ರಿಂದ ಪಕ್ಷದ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ