M.P. ಆಧ್ಯಾತ್ಮಿಕ ಅಂಗಳ-ನಾಗದೇವತೆ-ನಾಗಪಂಚಮಿ/ಮಹತ್ವ

ಕೃಪೆ ಆದ್ಯಾತ್ಮಿಕ ವಿಚಾರ ಬಳಗ

*ನಾಗಪಂಚಮಿ, ತನ್ನಿಮಿತ್ತ ಈ ಬರೆಹ..!*

” ನಾಗದೇವತೆ-ನಾಗಪಂಚಮಿ ”

ಒಮ್ಮೆ ಕಶ್ಯಪರ ಪತ್ನಿಯರಾದ ಕದ್ರು-ವಿನತೆಯರಲ್ಲಿ ಮಾತಿನ ಜಗಳವಾದಾಗ,ಕದ್ರು ತನ್ನ ಮಕ್ಕಳಾದ ನಾಗಗಳ ಸಹಾಯ ಕೇಳಿದಳು.ತಾಯಿಯ ಮೋಸಕೃತ್ಯಕ್ಕೆ ಅವು ಸಮ್ಮತಿಸದಿದ್ದಾಗ ಕೋಪಗೊಂಡ ಕದ್ರುವು “ಜನಮೇಜಯನ ಸರ್ಪಯಾಗದಲ್ಲಿ ನೀವೆಲ್ಲ ನಾಶವಾಗಿ”
ಎಂದು ಶಪಿಸಿದಳು.ಶಾಪದಿಂದ ಕುದಿಯುತ್ತಿದ್ದ ವಾಸುಕಿಗೆ ಬ್ರಹ್ಮನು ನಿನ್ನ ತಂಗಿ “ಜರತ್ಕಾರುವನ್ನು “ಜರತ್ಕಾರು” ಮುನಿಗೆ ಕೊಟ್ಟು ಮದುವೆ ಮಾಡು.
ಅವರಿಗೆ ಜನಿಸುವ ಮಹಾತೇಜಸ್ವಿಯಾದ “ಆಸ್ತಿಕ”ನೆಂಬ ಮುನಿಯಿಂದ ನಿಮಗೆ ಒಳ್ಳೆಯದಾಗುವುದು” ಎಂದು ಶಾಪ ವಿಮೋಚನೆಯ ಮಾರ್ಗ ತಿಳಿಸಿದನು.
ವಾಸುಕಿಯು ಹಾಗೆ ಮಾಡಿದನು.
ಆಸ್ತಿಕನು ಜನಮೇಜಯನಿಗೆ ಜ್ಞಾನಬೋಧಿಸಿ ಸರ್ಪಯಾಗವನ್ನು ನಿಲ್ಲಿಸಿದನು.ಬ್ರಹ್ಮನು ಹೇಳಿದ ದಿನ ಮತ್ತು ಸರ್ಪಯಾಗ ನಿಲ್ಲಿಸಿದ ದಿನ ಎರಡೂ “ಶ್ರಾವಣ ಶುದ್ಧ ಪಂಚಮಿ”ಯಾಗಿತ್ತು.

ಶ್ರೀಕೃಷ್ಣನು ಯಮುನಾನದಿಯಲ್ಲಿದ್ದ ಕಾಳಿಂದ ನಾಗನನ್ನು ಮರ್ದಿಸಿ ಸಾತ್ವಿಕನನ್ನಾಗಿಸಿದ ದಿನವೂ “ಶ್ರಾವಣಶುದ್ಧ ಪಂಚಮಿ.”
ಪಾರ್ವತಿಯ ಮಾನಸಪುತ್ರಿಯಾದ ಮಾನಸಾ ಎಂಬ ನಾಗದೇವತೆಯು ಎಲ್ಲರೂ ತನ್ನನ್ನು ಆರಾಧಿಸಬೇಕೆಂಬ ದುರಾಸೆಯಿಂದ ಶಿವಭಕ್ತ ಚಾಂದನನ್ನು ಕಾಡಿ ಕೊನೆಯಲ್ಲಿ ತಾನೇ ಪರಾಜಿತಳಾದುದು ಇದೇ “ಪಂಚಮಿ”ಯಂದು.
ಈ ಕಥೆಯನ್ನು ಕೋಲಾಟದ ಹಾಡಾಗಿ ಉತ್ತರದ ಕಡೆ ಹಾಡುತ್ತಾರೆ.

ಒಂದುದಿನ ರೈತನೊಬ್ಬನ ನೇಗಿಲಿಗೆ ಸಿಕ್ಕಿ ಹಾವಿನ ಮರಿಗಳು ಸತ್ತವು.
ರೊಚ್ಚಿಗೆದ್ದ ಅವುಗಳ ತಾಯಿ ರೈತನ ಮನೆಯವರನ್ನೆಲ್ಲ ಕಚ್ಚಿ ಕೊಂದು,
ನೆರೆಹಳ್ಳಿಯಲ್ಲಿದ್ದ ಮಗಳನ್ನು ಕೊಲ್ಲಲು ಹೋದಾಗ ಅವಳು ಮಣ್ಣಿನಲ್ಲಿ ನಾಗಮೂರ್ತಿಮಾಡಿ ಹಾಲೆರೆದು ಪೂಜಿಸುತ್ತಿದ್ದುದನ್ನು ಕಂಡು ಅದರ ಕೋಪ ಇಳಿದು,
ಅವಳ ಕೋರಿಕೆಯಂತೆ ರೈತನ ಮನೆಯವರನ್ನೆಲ್ಲ ಬದುಕಿಸಿತು.ಈ ಘಟನೆ ನಡೆದುದೂ “ಶ್ರಾವಣ ಶುದ್ಧ ಪಂಚಮಿಯ ದಿನ.”

ತೀರ ಬಡತನದಲ್ಲಿದ್ದ ತನ್ನ ತಂಗಿಯನ್ನು ತೌರಿಗೆ ಕರದುಕೊಂಡು ಬರುವಾಗ ಅವಳ ಮೈಮೇಲಿನ ಒಡವೆಗಳನ್ನು ಕಂಡು ದುರಾಸೆಯಿಂದ ಕೊಲ್ಲಲು ಅವಳ ಅಣ್ಣನು ದೊಡ್ಡಕಲ್ಲನ್ನೆತ್ತಿಕೊಂಡಾಗ ಅದರ ಕೆಳಗಿದ್ದ ಸರ್ಪ ಕಚ್ಚಿ ಮೃತನಾದನು.ತಂಗಿಯು ವಿಧವಿಧವಾಗಿ ನಾಗನನ್ನು ಪ್ರಾರ್ಥಿಸಿ ಅಣ್ಣನನ್ನು ಬದುಕಿಸಿಕೊಂಡಳು.
ಇದೂ “ಪಂಚಮಿ”ಯಂದು ನಡೆದುದು.ಅಂದಿನಿಂದ “ನಾಗಪಂಚಮಿ” ಹಬ್ಬವು “ಅಣ್ಣ-ತಂಗಿ-ಸೋದರರ ಹಬ್ಬ” ವೆಂದು ತವರಿಗೆ ಹೆಣ್ಣುಮಕ್ಕಳನ್ನು ಕರೆತರುವ ಆಚರಣೆ ಬಂದಿತು.

ನಾಗಾರಾಧನೆ ಜಗತ್ತಿನ ಬಹುತೇಕ ದೇಶ,
ಧರ್ಮಗಳಲ್ಲಿ, ಜನಾಂಗಗಳಲ್ಲಿ ಇದೆ.
ನಾಗವು ಭಯ-ಭಕ್ತಿಗಳಿಂದ ಪೂಜಿಸುವ ಪ್ರಾಣಿಯಾಗಿದ್ದು,ಅನೂಚಾನವಾಗಿ,ಪೂಜಿಸುವ ಸಂಪ್ರದಾಯವು ನಡೆದುಕೊಂಡು ಬರುತ್ತಿದೆ.
ಭಾರತೀಯರಿಗೆ ಗೋವು ಮತ್ತು ನಾಗ ಪೂಜ್ಯ ಪ್ರಾಣಿಗಳು.ಹಾವು ಆಹಾರವಿಲ್ಲದೆ ದೀರ್ಘಕಾಲ ಬದುಕುವ,
ಹಳೆಯಚರ್ಮವನ್ನು ಕಳಚಿ(ಪೊರೆಬಿಟ್ಟು) ಪುನರ್ಜನ್ಮ ಪಡೆಯುವ ರಹಸ್ಯ,
ನೆಲಕ್ಕೆ ಹೆಡೆಬಡಿದು ಪ್ರಾಣ ಬಿಡುವ ರೀತಿಗಳು ಭಯದೊಂದಿಗೆ ಭಕ್ತಿಯನ್ನೂ ಹುಟ್ಟಿಸುವುವು.

ಪವಿತ್ರ ಗ್ರಂಥ ಬೈಬಲ್ಲಿನ ಪ್ರಕಾರ ಸೈತಾನನು ನಾಗರೂಪದಲ್ಲಿದ್ದನು. ಸೈತಾನನು ಆದಂ ಮತ್ತು ಈವ್ ರನ್ನು ಆಕರ್ಷಿಸಿ ಮನುಕುಲದ ಸೃಷ್ಟಿಗೆ ಕಾರಣ ಎಂದಿದೆ.

ಹಿಂದೂಗಳಿಗೆ “ಅನಂತ”ನೆಂಬ ನಾಗ ತನ್ನ ಹೆಡೆಯ ಮೇಲೆ ಭೂಮಿಯನ್ನು ಹೊತ್ತಿದ್ದಾನೆ,
ತನ್ನ ಸುರುಳಿಯ ತಲ್ಪದ ಮೇಲೆ ಮಹಾವಿಷ್ಣುವು “ಶೇಷಶಾಯಿಯಾಗಿ” ಪವಡಿಸಿದ್ದಾನೆ,
ಶಿವನು ನಾಗಭೂಷಣ,
ಗಣಪತಿಯು ಹೊಟ್ಟೆಗೆ ನಾಗನನ್ನು ಬಿಗಿದುಕೊಂಡಿದ್ದಾನೆಂಬ ನಂಬಿಕೆ ಇದೆ.

ಮೆಕ್ಸಿಕೋ ಪುರಾಣದಂತೆ ನಾಗದೇವಿಯು ಸಿಹೂಕೋಹಂಟೆಗೆ ಜನ್ಮ ನೀಡಿದ್ದ ಗಂಡು-ಹೆಣ್ಣುಗಳೇ ಮನುಕುಲದ ಹುಟ್ಟಿಗೆ ಕಾರಣರು.ನಾಗದೇವತೆ ಇರೆಥೋನಸ್ ದೇವಾಲಯದಲ್ಲಿ ಪ್ರಾಚೀನ ಕಾಲದಲ್ಲಿ ಜೀವಂತ ನಾಗನನ್ನೇ ಪೂಜಿಸುತ್ತಿದ್ದರು.
ನಾಗವು ಈಜಿಪ್ಟಿನ ದೇವತೆ.
ನೇಫ,ಥೋತ್,ಹರ್ಮೆಸ್ ರ ಚಿಹ್ನೆಯೂ ನಾಗ.
ಅಲ್ಲಿನ ದೇವಾಲಯಗಳ ಮುಖಮಂಟಪದಲ್ಲಿ ಎರಡು ಹೆಡೆಯ ನಾಗಶಿಲ್ಪಗಳಿವೆ.ನಾಗಗಳು ಪಾತಾಳ ಮತ್ತು ಭೂಮಿಯ ಜೋಡಣೆಗೆ ಕಾರಣವೆಂದು ಪ್ರಾಚೀನ ಗ್ರೀಕರು ನಂಬಿದ್ದರು.
ಗ್ರೀಕ್ ವೀರರ ಚಿತ್ರಗಳಲ್ಲಿ ಶಕ್ತಿಯ ಪ್ರತೀಕವಾದ ನಾಗಚಿತ್ರವಿರುವುದು ಸರ್ವೇಸಾಮಾನ್ಯ. ಬೇಬಿಲೋನಿಯಾ,ಬರ್ಮಾ,ಜಾವಾ ಮತ್ತು ಬೋರ್ನಿಯೋ ದ್ವೀಪಗಳಲ್ಲಿ ನಾಗ ದೇವಾಲಯಗಳಿದ್ದು ನಾಗಾರಾಧನೆ ಪ್ರಚಾರದಲ್ಲಿದೆ.
ಪರ್ಶಿಯನ್ನರು ನಾಗದೇವಾಲಯಗಳನ್ನು ನಿರ್ಮಿಸಿ ಸಂಭ್ರಮದಿಂದ ಉತ್ಸವ ಆಚರಿಸುತ್ತಿದ್ದರು.

ಚೀನೀಯರು ನಾಗನು ವಂಶದ ಮೂಲಪುರುಷನೆಂದು,
ನಂಬಿದರೆ
ಉತ್ತರ ಅಮೆರಿಕಾದ ಮೊಹಿಕಾ ಜನಾಂಗದವರಿಗೆ ನಾಗ ಆರಾಧ್ಯ ದೇವತೆ.ಆಫ್ರಿಕಾದ ಗುಡ್ಡಗಾಡಿನ ಜನರು ಸತ್ತವರ ಆತ್ಮವು ಹಾವಿನ ರೂಪದಲ್ಲಿ ಚಲಿಸುವುದೆಂದೂ,
ಭಾರತೀಯರು ಗುಪ್ತನಿಧಿಗಳನ್ನು ಕಾಯುತ್ತದೆ ಎಂದು ನಂಬಿದ್ದಾರೆ.

ಪರಶುರಾಮರ ಭೂಮಿ “ಕರಾವಳಿ”ಯಲ್ಲಿ ನಾಗಶಾಪ ಪರಿಹಾರಕ್ಕಾಗಿ ನಾಗಮಂಡಲ,ನಾಗಪ್ರತಿಷ್ಠೆ,
ಸರ್ಪಸಂಸ್ಕಾರ,ಆಶ್ಲೇಷಾ ಬಲಿ ಇತ್ಯಾದಿಗಳು ಈಗಲೂ ನಡೆಯುತ್ತಿವೆ.
ಮಕ್ಕಳಾಗದ ದಂಪತಿಗಳು ನಾಗನ ಮೊರೆ ಹೋಗಿ ಸಂತಾನ ಪ್ರಾಪ್ತಿಗಾಗಿ ಸರ್ಪಸಂಸ್ಕಾರ,ನಾಗಪ್ರತಿಷ್ಠೆ ಮಾಡಿಸುತ್ತಾರೆ.

“ನಾಗನಿಗೆ ಹಾಲೆರೆಯುವುದು ಹಾಲಿನ ದುರುಪಯೋಗ,ಅದನ್ನು ಮಕ್ಕಳಿಗೆ ಕೊಡಿ,” ಎಂದು ಉಪದೇಶಿಸುವ ಮಹಾನುಭಾವರೂ ನಮ್ಮಲ್ಲಿದ್ದಾರೆ.
ಅವರಿಗೆ ಸಿನೆಮಾ ನಟರ,
ರಾಜಕಾರಣಿಗಳ,ಕ್ರಿಕೆಟ್ ವೀರರ ಕಟೌಟ್ ಗಳಿಗೆ ಲೀಟರ್ ಗಟ್ಟಲೆ ಹಾಲಿನಿಂದ #ಕ್ಷೀರಾಭಿಷೇಕ ಮಾಡುವುದು ಕಾಣಿಸದಂತಹ #ಜಾಣಕುರುಡು.!!

ಎಲ್ಲರಿಗೂ ನಾಗಪಂಚಮಿಯ ಶುಭಾಶಯಗಳು.
ನಾಗದೇವತೆಯ ಅನುಗ್ರಹದಿಂದ ನನ್ನ ಎಲ್ಲ ಗೆಳೆಯ ಗೆಳತಿಯರು ಮತ್ತು ಅವರ ಕುಟುಂಬದವರು,ರೋಗಬಾಧಾ ರಹಿತರಾಗಿ,
ಸುಖ,ಆರೋಗ್ಯ,ಸಂಪತ್ಸಮೃದ್ಧಿಯ ದೀರ್ಘಾಯುಷಿಗಳಾಗುವಂತಾಗಲಿ ಎಂದು ಹಾರೈಸುತ್ತೇನೆ.

*!! ಶ್ರೀಕೃಷ್ಣಾರ್ಪಣಮಸ್ತು !!*

*ನಾಗ ಪಂಚಮಿ ಮಹತ್ವ..!*

ಹಿಂದುಗಳು ಆಚರಿಸುವ ಅನೇಕ ಹಬ್ಬ ಹರಿ ದಿನಗಳು ಸಾಮಾಜಿಕ, ಧಾರ್ಮಿಕ, ವೈಜ್ಞಾನಿಕ, ದೃಷ್ಟಿಕೋನದಿಂದ ಕೂಡಿರುತ್ತವೆ. ಅಂತಹ ಹಬ್ಬಗಳಲ್ಲಿ ನಾಗರ ಪಂಚಮಿ ಕೂಡ ಒಂದು,
ಉತ್ತರ ಭಾರತದಲ್ಲಿ ಇದನ್ನು ಶಿವ ಮತ್ತು ನಾಗ ಪೂಜೆಯೆಂದು ಕಾವಡಿ ಎಂಬ ದೀಕ್ಷಾ ಪಡೆದ ಯುವಕರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಪಾದಯಾತ್ರೆಗಳನ್ನು ಮಾಡುತ್ತಾ ಕಾಣಿಸುತ್ತಾರೆ. ಇವರು
ಶಿವ ಮತ್ತು ನಾಗನನ್ನು ಆರಾಧಿಸುತ್ತಾರೆ.

ಹೆಣ್ಣು ಮಕ್ಕಳು ಇಂದು ಉಪವಾಸ ಮಾಡುತ್ತಾರೆ

ಇದಕ್ಕೂ ಒಂದು ಪೌರಾಣಿಕ ಕಥೆ ಉಂಟು. ಈ ನಾಗರ ಪಂಚಮಿ ಹಬ್ಬ ವಿಶೇಷವಾಗಿ ಹೆಣ್ಣು ಮಕ್ಕಳು ಬಹಳ ಉತ್ಸಾಹದಿಂದ ಹೊಸ ವಸ್ತ್ರಗಳನ್ನು ಧರಿಸಿ ಕಲ್ಲಿನ ನಾಗದೇವರನ್ನು ಕ್ಷೀರದಿಂದ ಅಭಿಷೇಕ ಮಾಡುತ್ತಾರೆ.
ಬಹಳ ದಿನಗಳ ಹಿಂದೆ ಸತ್ಯಶ್ವರಿ ಎಂಬ ದೇವತೆ ಇದ್ದರಂತೆ, ಆ ದೇವತೆಯ ತಮ್ಮ ಸತ್ಯೇಶ್ವರ ಈತ ನಾಗರಪಂಚಮಿಯ ಒಂದು ದಿನ ಮೊದಲು ತೀರಿಕೊಂಡನಂತೆ, ಅದಕ್ಕಾಗಿ ಆ ದಿನ ಸತ್ಯಶ್ವರಿ ತಮ್ಮನ ಹೆಸರಿನ ಮೇಲೆ ಉಪವಾಸ ಆಚರಿಸಲು ಪ್ರಾರಂಭಿಸಿದಳಂತೆ, ಆಗ ತಮ್ಮ ನಾಗ ರುಪ ದಿಂದ ಅಕ್ಕನಿಗೆ ಪ್ರತ್ಯಕ್ಷನಾಗಿ ನಾನು ನಾಗರಪದಲ್ಲಿದ್ದೇನೆ ಎಂದು ಹೇಳಿದನಂತೆ, ಅದಕ್ಕಾಗಿ ಹೆಣ್ಣು ಮಕ್ಕಳು ಅಣ್ಣ ತಮ್ಮಂದಿರ ಕ್ಷೇಮ ಕೋರಿ ಕಲ್ಲಿನ ನಾಗಕ್ಕೆ ಕ್ಷೀರಭಿಷೇಕ ಮಾಡುವ ಸಾಂಪ್ರದಾಯ ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ.

ನಾಗರ ಪಂಚಮಿ ಹಬ್ಬವನ್ನು ಯಾಕೆ ಆಚರಿಸಲಾಗುತ್ತದೆ? ಹೆಣ್ಮಕ್ಕಳ ಹಬ್ಬ ಯಾಕೆ? ಇಲ್ಲಿದೆ ಕಥೆ

ಹಿಂದೂ ಪಂಚಾಂಗದ ಪ್ರಕಾರ ಎಲ್ಲ ಹಬ್ಬಗಳಿಗೆ ಮುನ್ನುಡಿಯಂತೆ ಬರುವ ಹಬ್ಬ ಎಂದರೆ ಅದು ನಾಗರ ಪಂಚಮಿ. ಶ್ರಾವಣ ಶುದ್ಧ ಪಂಚಮಿಯಿಂದ ಆಚರಿಸಲ್ಪುಡುವ ಈ ಹಬ್ಬ ಮುಂದೆ ಬರಲಿರುವ ಗಣೇಶ ಚತುರ್ಥಿ, ಕೃಷ್ಣಾಷ್ಟಮಿ, ನವರಾತ್ರಿ, ಊರಿನ ಜಾತ್ರೆಗೆ, ಎಲ್ಲ ಶುಭ ಆಚರಣೆಗಳಿಗೆ ಮೊದಲ ಮೆಟ್ಟಿಲು.

ನಾಗರ ಪಂಚಮಿ ಸಂಬಂಧಿಸಿದಂತೆ ಜನಪದ ಮತ್ತು ಪುರಾಣದಲ್ಲಿ ಹಲವು ಕಥೆಗಳಿವೆ. ಜನಪದ ಕಥೆಯ ಪ್ರಕಾರ ನಾಗರ ಪಂಚಮಿ ಬರುವುದು ಮುಂಗಾರಿನ ರಭಸದ ದಿನಗಳ ಮಧ್ಯೆ. ಈ ಕಾಲದ ಕೃಷಿ ಚಟುವಟಿಕೆಗಳು ಒಂದು ಹಂತ ತಲುಪಿರುತ್ತವೆ. ಈ ಕಾಲದಲ್ಲಿ ಕೀಟ, ಮಿಡತೆಗಳ ಹಾವಳಿ ಅಧಿಕ. ಅಷ್ಟೇ ಅಲ್ಲದೆ ಫಸಲು ತಿನ್ನಲು ಬರುವ ಇಲಿಗಳಿಗೂ ಕೊರತೆಯಿಲ್ಲ. ಇವೆಲ್ಲದರಿಂದ ರೈತನ ಫಸಲನ್ನು ಕಾಪಾಡುವುದು ಹಾವುಗಳು. ಇಲಿ, ಕಪ್ಪೆಗಳ ಅತಿಯಾದ ಹಾವಳಿಯನ್ನು ನಿಯಂತ್ರಿಸುವ ನಾಗರನಿಗೆ ಪುಟ್ಟದೊಂದು ಧನ್ಯವಾದ ಹೇಳಲು ನಡೆಸುವ ಪೂಜೆಯೇ ನಾಗರ ಪಂಚಮಿ.

ಸ್ಕಂದ ಪುರಾಣದಲ್ಲಿ ನಾಗರ ಪಂಚಮಿಯ ಬಗ್ಗೆ ಕೆಲ ಮಾಹಿತಿಗಳು ಸಿಗುತ್ತದೆ. ಶ್ರೀಕೃಷ್ಣನ ಮಗನಾದ ಸಾಂಬನು ಶಿವಸುತ ಸುಬ್ರಹ್ಮಣ್ಯನಲ್ಲಿ ನಾಗರ ಪಂಚಮಿಯನ್ನು ಯಾಕೆ ಆಚರಿಸಲಾಗುತ್ತದೆ ಎಂದು ಪ್ರಶ್ನೆ ಕೇಳಿದಾಗ ಆತನ ಒಂದು ಕಥೆಯನ್ನು ಹೇಳುತ್ತಾನೆ.

ಹಿಂದೆ ದೇವಶರ್ಮ ಎಂಬ ಬ್ರಾಹ್ಮಣನೊಬ್ಬನಿದ್ದನು. ಆತನಿಗೆ 8 ಗಂಡು ಮಕ್ಕಳು ಹಾಗೂ ಒಬ್ಬಾಕೆ ಹೆಣ್ಣು ಮಗಳಿದ್ದಳು. ಒಂದು ದಿನ ಗರುಡನಿಂದ ಹೆದರಿಸಲ್ಪಟ್ಟ ನಾಗರವೊಂದು ಈ ಕನ್ನಿಕೆಯ ಬಳಿ ಬಂದು ಆಶ್ರಯವನ್ನು ಕೇಳುತ್ತದೆ. ಭಕ್ತಿಯಿಂದ ಕನ್ನಿಕೆ ಆ ನಾಗನಿಗೆ ಹಾಲು, ಫಲಗಳನ್ನು ಇಟ್ಟು ಭಕ್ತಿಯಿಂದ ಸಾಕುತ್ತಾಳೆ. ಇದಕ್ಕೆ ಪ್ರತಿಯಾಗಿ ಆ ನಾಗವು ದಿನಂಪ್ರತಿ ಆಕೆಗೆ ಒಂದು ತೊಲೆ ಚಿನ್ನವನ್ನು ನೀಡುತ್ತಿರುತ್ತದೆ. ಹೀಗಿರಲು ಒಂದು ದಿನ ಎಂಟು ಗಂಡು ಮಕ್ಕಳಲ್ಲಿ ಒಬ್ಬನು ತುಂಬಾ ಬಂಗಾರ ಬೇಕೆಂದು ನಾಗನನ್ನು ಪೀಡಿಸಿ, ಕಾಲಿನಿಂದ ಒದೆಯುತ್ತಾನೆ. ಕೋಪಗೊಂಡ ನಾಗರ ಹಾವು ಅವನ್ನು ಸೇರಿದಂತೆ ಇತರ ಏಳು ಜನರನ್ನು ಕೊಂದು ಹೊರಟು ಹೋಗುತ್ತದೆ. ತನ್ನ ಅಣ್ಣಂದಿರ ಸಾವಿಗೆ ತಾನೇ ಕಾರಣನಾದೇ ಎಂದು ಆ ಕನ್ನಿಕೆ, ದೇವರ ಇದಿರಿನಲ್ಲಿ ಶಿರಚ್ಛೇದನಕ್ಕೆ ಮುಂದಾದಾಗ, ನಾರಾಯಣನು ವಾಸುಕಿಗೆ ಆ ಸತ್ತ ಹುಡುಗರನ್ನು ಬದುಕಿಸಲು ಹೇಳುತ್ತಾನೆ. ಈ ರೀತಿ ಪುನಃ ಅಣ್ಣಂದಿರ ಜೀವವನ್ನು ಮರಳಿ ಪಡೆದುಕೊಳ್ಳುವಲ್ಲಿ ಆ ಕನ್ನಿಕೆ ಯಶಸ್ವಿಯಾದ ದಿನವೇ ನಾಗರ ಪಂಚಮಿ.

ಹೆಣ್ಣುಮಕ್ಕಳ ಹಬ್ಬ:
ನಾಗರಪಂಚಮಿ ಹೆಚ್ಚಾಗಿ ಹೆಣ್ಣು ಮಕ್ಕಳ ಹಬ್ಬ. ನಾಗರಪಂಚಮಿಯ ಹಿಂದಿನ ದಿನ ಸಹೋದರಿ ನಾಗದೇವತೆಗೆ ಬೇಡಿಕೊಂಡರೆ ಸಹೋದರನಿಗೆ ಲಾಭ ಹಾಗೂ ರಕ್ಷಣೆ ಸಿಗುತ್ತದೆ. ನಾಗರಪಂಚಮಿ ಮಾಂಗಲ್ಯಪ್ರದ ಹಾಗೂ ಸಂತಾನಪ್ರದ ಎಂಬ ನಂಬಿಕೆ. ಉತ್ತರ ಕರ್ನಾಟಕದಲ್ಲಿ ನಾಗರಪಂಚಮಿ ವಿಶೇಷತೆಗಳಿಂದ ಕೂಡಿರುತ್ತದೆ. `ನಾಗರ ಪಂಚಮಿ ಬಂತು, ಅಣ್ಣ ಬರುತ್ತಾನೆ ಕರೆಯಾಕ, ಕರಿ ಸೀರೆ ಉಡಿಸಾಕ‘ ಎನ್ನುವ ಜಾನಪದ ಹಾಡು ಹಬ್ಬದ ವಿಶೇಷತೆ ಸಾರುತ್ತದೆ. ತವರಿಗೆ ಹೆಣ್ಣುಮಕ್ಕಳನ್ನು ಆಹ್ವಾನಿಸಿ, ಉಡುಗೊರೆ ನೀಡಿ ಗೌರವಿಸಲಾಗುತ್ತದೆ.

ಸಿಂಧೂ ಜನರಲ್ಲೂ ನಂಬಿಕೆಯಿತ್ತು:
ನಮ್ಮ ಪೂರ್ವಜರ ಕಾಲದಿಂದಲೂ ನಾಗಪೂಜೆ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಸಿಂಧೂ ಸಂಸ್ಕೃತಿಯ ಉತ್ಕನನ ತಾಣಗಳಲ್ಲಿ ಸಿಕ್ಕಿರುವ ಅನೇಕ ಅವಶೇಷಗಳು ಅಲ್ಲಿನ ಜನರು ನಾಗ (ಸರ್ಪ) ಪೂಜೆ ಮಾಡುತ್ತಿದ್ದರು ಎನ್ನುವುದು ತಿಳಿದುಬರುತ್ತದೆ. ಅವರ ನಂತರ ಬಂದಿರುವ ಅನೇಕ ರಾಜಮನೆತನಗಳು ಸರ್ಪವನ್ನು ವಿಶೇಷವಾಗಿ ಪೂಜಿಸುತ್ತಿದ್ದರು. ಈ ಬಗ್ಗೆ ಇತಿಹಾಸದ ಪುಟಗಳಲ್ಲಿ ಉಲ್ಲೇಖವಿದೆ. ಮಾನವ ಜನಾಂಗದವರು ಆದಿಕಾಲದಿಂದಲೂ ಈ ನಾಗಾರಾಧನೆ ನಡೆಸಿಕೊಂಡು ಬಂದಿದ್ದರು ತಿಳಿದುಬರುತ್ತದೆ.

ಭಾರತದ ಇತಿಹಾಸದ ಪುಟಗಳಲ್ಲಿ ನಾಗವಂಶಗಳ ಕುರಿತಾಗಿ ಉಲ್ಲೇಖವಿದೆ. ಈಗಲೂ ಭಾರತದ ಕೇರಳ, ಅಸ್ಸಾಂ, ನಾಗಾಲ್ಯಾಂಡ್‍ಗಳಲ್ಲಿ ನಾಗಾ ಜನಾಂಗದ (ನಾಗವಂಶೀಯರು) ಇದ್ದಾರೆ. ಭಾರತಕ್ಕಷ್ಟೇ ನಾಗ ಪೂಜೆ ಸೀಮಿತವಾಗಿಲ್ಲ. ಗ್ರೀಸ್, ಜಪಾನ್, ಚೀನಾ, ಈಜಿಪ್ಟ್ ಸೇರಿದಂತೆ ಮುಂತಾದ ಪುರಾತನ ಸಂಸ್ಕøತಿಯುಳ್ಳ ಜನತೆ ನಾಗ ಪೂಜೆ ಮಾಡುತ್ತಿದ್ದರು. ನಮ್ಮ ನೆರೆಯ ರಾಜ್ಯ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಬತ್ತೀಸ ಶಿರಾಳ್ ಗ್ರಾಮದಲ್ಲಿ ನಾಗರಪಂಚಮಿ ದಿನ ಜೀವಂತ ನಾಗರಹಾವುಗಳನ್ನು ಪೂಜಿಸಲಾಗುತ್ತದೆ.

ಕ್ಷೀರಾಭಿಷೇಕ ಮಾಡೋದು ಯಾಕೆ?
“ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಮ್| ಶಂಖಪಾಲಂ ಧೃತರಾಷ್ಟ್ರಂ ತಕ್ಷಕಂ, ಕಾಲಿಯಂ ತಥಾ” ಎಂಬ ಶ್ಲೋಕವು ನಾಗ ದೇವನ ವಿವಿಧ ಹೆಸರುಗಳನ್ನು ಹೇಳುತ್ತದೆ. ಅನಂತ, ವಾಸುಕೀ, ಶೇಷ, ಪದ್ಮನಾಭ, ಕಂಬಲ, ಶಂಖಪಾಲ, ಧೃತರಾಷ್ಟ್ರ, ತಕ್ಷಕ ಮತ್ತು ಕಾಲಿಯಾ ಹೀಗೆ ಒಂಭತ್ತು ಜಾತಿಯ ನಾಗಗಳ ಆರಾಧನೆ ಮಾಡಲಾಗುತ್ತದೆ. ಸರ್ಪಭಯ ಮತ್ತು ವಿಷದಿಂದ ತೊಂದರೆಯಾಗದೇ ಇರಲು ಹಲವು ಕಡೆ ನಾಗನ ಕಲ್ಲುಗಳಿಗೆ ಕ್ಷೀರಾಭಿಷೇಕ ಮಾಡುವ ಪದ್ಧತಿಯಿದೆ.

ನಾಗರಪಂಚಮಿಯ ದಿನದಲ್ಲಿ ವಾತಾವರಣವು ಸ್ಥಿರವಾಗಿರುತ್ತದೆ. ಸಾತ್ವಿಕತೆಯನ್ನು ಗ್ರಹಿಸಲು ಈ ಕಾಲವು ಅತ್ಯಂತ ಯೋಗ್ಯ ಮತ್ತು ಬಹಳ ಉಪಯುಕ್ತವಾಗಿದೆ. ಶ್ರಾವಣ ಶುದ್ಧ ಪಂಚಮಿಯ ದಿನ, ಗೋಮಯ (ಸಗಣಿ)ಯಿಂದ ಬಾಗಿಲು ಸಾರಿಸಿ, ರಂಗೋಲಿ, ಇಲ್ಲವೇ ಅರಿಶಿಣ, ಕುಂಕುಮದಿಂದ ನಾಗರ ಚಿತ್ರಗಳನ್ನು ಬರೆದು ನೇಮನಿಷ್ಠೆಯಿಂದ ಪೂಜೆ ಮಾಡುತ್ತಾರೆ.

ಸರ್ಪಯಜ್ಞವನ್ನು ನಿಲ್ಲಿಸಿದ ದಿನ:
ಜನಮೇಜಯ ರಾಜ ತನ್ನ ತಂದೆ ಪರೀಕ್ಷಿತ ರಾಜನ ಸಾವಿಗೆ ಸರ್ಪವೊಂದು ಕಾರಣವೆಂದು ತಿಳಿದು, ಭೂಲೋಕದಲ್ಲಿ ಸರ್ಪಸಂಕುಲವನ್ನು ನಿರ್ನಾಮ ಮಾಡಲು ‘ಸರ್ಪಯಜ್ಞ’ವನ್ನು ಆರಂಭಿಸುತ್ತಾನೆ. ಋತ್ವಿಜರು ಹೋಮಮಾಡಲು ಆರಂಭಿಸಿದಾಗ ಸರ್ಪಗಳು ಒಂದರ ಹಿಂದೆ ಒಂದರಂತೆ ಬಂದು ಅಗ್ನಿಕುಂಡಕ್ಕೆ ಬಿದ್ದು ಬುದಿಯಾಗತೊಡಗಿತು. ಇದನ್ನು ಕಂಡ ಉಳಿದ ಸರ್ಪಗಳು ಸರ್ಪರಾಜ ವಾಸುಕಿಯ ತಂಗಿಯಾದ ಜರತ್ಕಾರು ಬಳಿ ಹೋಗಿ ದಯವಿಟ್ಟು ನಮ್ಮನ್ನು ಆ ರಾಜನ ಹೋಮದಿಂದ ರಕ್ಷಿಸು ಎಂದು ಬೇಡಿಕೊಳ್ಳುತ್ತವೆ. ಸರ್ಪಗಳ ಮನವಿಗೆ ಜರತ್ಕಾರು ಒಪ್ಪಿ ತನ್ನ ಮಗನಾದ ಆಸ್ತೀಕನಿಗೆ ಯಜ್ಞವನ್ನು ನಿಲ್ಲಿಸಿ ಬರುವಂತೆ ಸೂಚನೆ ನೀಡುತ್ತಾಳೆ. ಆಸ್ತೀಕ ಋಷಿಯು ಸರ್ಪಯಜ್ಞ ಮಾಡುವ ಜನಮೇಜಯ ರಾಜನ ಯಜ್ಞಶಾಲೆಯನ್ನು ಪ್ರವೇಶಿಸಿ ತನ್ನ ವಿದ್ಯಾಬಲದಿಂದ ಪ್ರಾಣಿ ಹಿಂಸೆ ಮಹಾಪಾಪ, ನೀನು ಈಗಾಗಲೇ ಮಾಡುತ್ತಿರುವ ಸರ್ಪಯಜ್ಞವನ್ನು ನಿಲ್ಲಿಸಬೇಕು ಎಂದು ಬೋಧಿಸಿದ. ಜನಮೇಜಯನು ಆಸ್ತಿಕನ ಮಾತಿಗೆ ಬೆಲೆಕೊಟ್ಟು ಸರ್ಪಯಜ್ಞವನ್ನು ನಿಲ್ಲಿಸಿದ ದಿನ ಪಂಚಮಿಯಾಗಿದೆಯಂತೆ.

ಶಿವನ ಆಭರಣ, ವಿಷ್ಣುವಿನ ಹಾಸಿಗೆ, ಗಣಪತಿಯ ಹೊಟ್ಟೆಯ ಪಟ್ಟಿ, ಸಮುದ್ರಮಂಥನ ಕಾಲದಲ್ಲಿ ಮಂದರ ಪರ್ವರತವೆಂಬ ಕಡಗೋಲಿಗೆ ಹಗ್ಗವಾಗಿ, ದುರ್ಯೋಧನನ ಧ್ವಜದ ಚಿಹ್ನೆಯಾಗಿ ನಾಗ ಕಾಣಿಸಿಕೊಳ್ಳುತ್ತಾನೆ.

ಈ ಪೃಥ್ವಿ ಶೇಷನಾಗರ ಹೆಡಿಯ ಮೇಲೆ ನಿಂತಿದೆ ಎಂಬ ಪುರಾಣ ಕಥೆ ಬರುತ್ತದೆ. ಶೇಷನಾಗ ರಾಮಾವತಾರದಲ್ಲಿ ರಾಮನ ತಮ್ಮ ಲಕ್ಷ್ಮಣನಾಗಿ, ಕೃಷ್ಣಾವತಾರದಲ್ಲಿ ಶ್ರೀ ಕೃಷ್ಣನ ಅಣ್ಣ ಬಲರಾಮನಾಗಿ ಅವತರಿಸಿದ್ದರು ಎಂದು ಕಥೆ ಬರುತ್ತದೆ,
ಈ ಎಲ್ಲ ಕಥೆಗಳು ನಾಗದೇವತೆಗೆ ಸಂಬಂಧ ಇದ್ದವು ಕಾರಣ ಈ ಹಬ್ಬಕ್ಕೆ ವಿಶೇಷ ಮಹತ್ವ.

*!! ಶ್ರೀಕೃಷ್ಣಾರ್ಪಣಮಸ್ತು !!*
*ಅಡ್ಮಿನ್ ಬಳಗ.*
.