ಈ ವರ್ಗಾವಣೆಯ ನಿರೀಕ್ಷೆ ಮಾಡಿರಲಿಲ್ಲ- ಮಾಹಿತಿ ಬಿಚ್ಚಿಟ್ಟ ನಿರ್ಗಮಿತ ಸಿಂಧೂರಿ

645
Share

ಈ ವರ್ಗಾವಣೆಯ ನಿರೀಕ್ಷೆ ಮಾಡಿರಲಿಲ್ಲ ನಾನು, ಒಳ್ಳೆಯ ಕೆಲಸ ಮಾಡುವ ಟೈಂ ಅಲ್ಲಿ ಈ ವರ್ಗಾವಣೆ ಆಗಿದೆ. ಏನ್ ನಡೆದಿದೆ ಹೇಗೆ ನಡೆದಿದೆ ಅನ್ನೋದು ಎಲ್ಲರ ಮುಂದೆ ನಡೆದಿದೆ. ಯಾವುದೋ ಅಧಿಕಾರಿಯನ್ನ ತೆಗೆಸಿ ಮಿಷನ್ ಮುಗಿಯಿತು ಅಂದಿಕೊಳ್ಳೋದು ತಪ್ಪು. ಈ ಥರ ಬೆಳವಣಿಗೆ ಯಾವ ಜಿಲ್ಲೆ ಯಾವ ಸಂಸ್ಥೆಯಲ್ಲಿ ಆದರೂ ವ್ಯವಸ್ಥೆ ಸರಿ ಮಾಡೋಕೆ ಆಗೋಲ್ಲ.ಈ ಬಗ್ಗೆ ನಾನು ಹೆಚ್ಚು ಪ್ರತಿಕ್ರಿಯೆ ನೀಡೋಲ್ಲ ಎಂದು ಹೇಳಿದರು.
ಕೋವಿಡ್ ನಿಯಂತ್ರಣಕ್ಕೂ ಪ್ರಾಮುಖ್ಯತೆ ಕೊಟ್ಟು ಕೆಲಸ ಮಾಡಿದ್ದೇನೆ. ವ್ಯಾಕ್ಸಿನೇಷನ್‍ನಲ್ಲಿ ಮೈಸೂರು ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಜುಲೈ ವೇಳೆಗೆ ಮೈಸೂರನ್ನು ಕರೊನಾ ಮುಕ್ತ ಅಂತ ಘೋಷಣೆ ಮಾಡಬೇಕು ಅನ್ನುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೇನೆ ಎಂದು ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿ ತಿಳಿಸಿದರು.
ಭೂ ಮಾಫಿಯಾ ಬಗ್ಗೆ ಮಾತನಾಡಿ ರಾಜಕಾರಣಿಗಳ ಬಣ್ಣ ಬಿಚ್ಚಿಟ್ಟ ರೋಹಿಣಿ ಸಿಂಧೂರಿ, ನನಗೆ ಕೆಲಸ ಮಾಡಲು ಬಿಡಲಿಲ್ಲ. ಕೆಲವರು ಅನಗತ್ಯವಾಗಿ ತೊಂದರೆ ಕೊಟ್ಟರು. ಭೂಮಿ ಒತ್ತುವರಿ ತೆರವು ಮಾಡಲು ನಾನು ಪ್ರಯತ್ನ ಮಾಡಿದ್ದೆ. ಕೆರೆಗಳನ್ನು ಉಳಿಸೋದು, ಸರ್ಕಾರಿ ಭೂಮಿ ರಕ್ಷಣೆ ಮಾಡೋದು ನನ್ನ ಆದ್ಯತೆ ಆಗಿತ್ತು. ಆ ನಿಟ್ಟಿನಲ್ಲಿ ಮೊದಲ ದಿನದಿಂದಲೂ ಕಾರ್ಯ ನಿರ್ವಹಿಸುತ್ತಿದೆ. ಕೇರ್ಗಳ್ಳಿ ಕೆರೆಯ ಒತ್ತುವರಿ ತೆರವು ಮಾಡಿ ನೀರು ತುಂಬಿಸಲು ಪ್ರಯತ್ನಿಸಿದ್ದೆ. ಅದರ ಜತೆಗೆ ಸರ್ವೇ ನಂ. 4ರ 1500 ಎಕರೆ ಜಾಗ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್‍ನಲ್ಲೂ ಒಳ್ಳೆಯ ಲಾಯರ್ ಇಟ್ಟು ಹೋರಾಟ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಮೈಸೂರಿನ ಜನ ನನ್ನನ್ನು ಮನೆ ಮಗಳಂತೆ ನೊಂಡಿಕೊಡಿದ್ದಾರೆ, ಮೈಸೂರು ನನಗೆ ತಾಯಿ ಮನೆ ಅನುಭವ ನೀಡಿದೆ. ಒಬ್ಬ ಮಗಳಾಗಿ ಮೈಸೂರಿನ ಎಲ್ಲ ಜನತೆಗೆ ನಾನು ಧನ್ಯವಾದ ಹೇಳುತ್ತಿನಿ ಎಂದು ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿ ಭಾವನಾತ್ಮಕವಾಗಿ ಹೇಳಿದರು.
ಅವರು ಇಂದು ಬೆಳಿಗ್ಗೆ ಮೈಸೂರಿನಲ್ಲಿ ಮಾತನಾಡುತ್ತ, ತವರು ಮನೆ ಬಿಟ್ಟು ಹೋಗುವ ಭಾವನೆ ನನಗೆ ಆಗುತ್ತಿದೆ. ಆದರೂ ಮಗಳು ತವರು ಮನೆ ಬಿಟ್ಟು ಹೋಗುವಂತೆ ಹೋಗ್ತಿದ್ದೇನೆ ಎಂದು ರೋಹಿಣಿ ಸಿಂಧೂರಿ ತಿಳಿಸಿದರು.
ಹೊಸದಾಗಿ ಬಂದ ಜಿಲ್ಲಾಧಿಕಾರಿಗೆ ಶುಭಾಶಯ ಹೇಳಲು ಬಂದಿದ್ದೆ, ಜಿಲ್ಲೆಯ ವಸ್ತುಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದೇನೆ. ಕೋವಿಡ್ ಕೆಲಸಗಳ ಬಗ್ಗೆಯೂ ಮಾಹಿತಿ ನೀಡಿದ್ದೇನೆ ಎಂದರು.

 


Share