ನಿರುದ್ಯೋಗಿ ಯುವಜನರ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ

327
Share

 

 

 

ಮೈಸೂರು,
ಇಂದು ನಗರದ ಮೈಸೂರು ಜಿಲ್ಲಾಧಿಕಾರಿ ಕಚೇರಿಯೆದುರು ಅಖಿಲ ಕರ್ನಾಟಕ ಅಖಿಲ ಭಾರತ ನಿರುದ್ಯೋಗಿ ಯುವಜನರ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ರಾಜ್ಯದ ಆರ್ಥಿಕ ಪರಿಸ್ಥಿತಿ ದಿನೇದಿನೇ ಅಧಃಪತನದತ್ತ ಸಾಗಿದೆ. ೨೦೧೮-೧೯ರ ಸಾಲಿನಲ್ಲಿ ಆರ್ಥಿಕ ಬಿಕ್ಕಟ್ಟಿನಿಂದಾಗಿ ಸಾವಿರಾರು ಅತೀಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ನೆಲಕಚ್ಚಿವೆ. ಪತ್ರಿಕೆಗಳಲ್ಲಿ ವರದಿಯಾದಂತೆ ಬೆಂಗಳೂರಿನ ಪೀಣ್ಯ ಕೈಗಾರಿಕಾವಲಯ ಒಂದರಲ್ಲೆ ೧೨ ಸಾವಿರಕ್ಕೂ ಹೆಚ್ಚು ಸಣ್ಣಪುಟ್ಟ ಕೈಗಾರಿಕೆಗಳು ಮುಚ್ಚಿ, ಲಕ್ಷಾಂತರ ಕಾರ್ಮಿಕರು ಉದ್ಯೋಗ ಕಳೆದುಕೊಂಡು ಬೀದಿಪಾಲಾದರು. ಇಂತಹ ಪರಿಸ್ಥಿತಿಯಲ್ಲಿ ಬಂದೆರಗಿದ ಕೋವಿಡ್-೧೯ ಮಹಾಮಾರಿಯನ್ನು ತಡೆಯಲೋ ಎಂದು ಮೊದಲನೆಯ ಸಂದರ್ಭದಲ್ಲಿ ದಿಢೀರನೆ ಹೇರಲಾದ ಲಾಕ್ಡೌನ್‌ನಿಂದಾಗಿ ಕೋಟ್ಯಾಂತರ ಜನರು ಉದ್ಯೋಗ ಕಳೆದುಕೊಂಡರು. ಈ ಸಂದರ್ಭದಲ್ಲಿ ದಿನಗೂಲಿ ನೌಕರರು, ವಲಸೆ ಕಾರ್ಮಿಕರು, ಹಮಾಲಿಗಳು, ಫ್ಯಾಕ್ಟರಿ-ಕಂಪನಿಗಳಲ್ಲಿ ಕೆಲಸ ಮಾಡುವವರು, ಸರ್ಕಾರಿ ಇಲಾಖೆಗಳಲ್ಲಿನ ಗುತ್ತಿಗೆ-ಹೊರಗುತ್ತಿಗೆ ನೌಕರರು, ಅತಿಥಿ ಉಪನ್ಯಾಸಕರು-ಶಿಕ್ಷಕರು-ಇವರ ಜೀವನವನ್ನು ಇನ್ನಷ್ಟು ಅತಂತ್ರ ಸ್ಥಿತಿಗೆ ತಳ್ಳಿತ್ತು. ಉದ್ಯೋಗವಿಲ್ಲದೆ ಒಂದು ದಿನದ ಊಟಕ್ಕೆ ಗತಿ ಇಲ್ಲದಂತೆ ಸತ್ತ ಜನರೆಷ್ಟೋ… ಮನನೊಂದು ಆತ್ಮಹತ್ಯೆ ಮಾಡಿಕೊಂಡವರು ಎಷ್ಟೋ?! ವಲಸೆ ಕಾರ್ಮಿಕರು ಮರಳಿ ತಮ್ಮ ಊರಿಗೆ ಕಾಲ್ನಡಿಗೆಯಲ್ಲೇ ನಡೆಯುವಾಗ ದಾರಿ ಮಧ್ಯೆ ಸತ್ತವರೆಷ್ಟೋ. ಈ ವಿಷಯಗಳಿಗೆ ಸಂಬಂಧಪಟ್ಟಂತೆ ಸರ್ಕಾರಗಳಲ್ಲಿ ಯಾವುದೇ ನಿಖರವಾದ ಮಾಹಿತಿ ಇಲ್ಲ. ನಂತರ ಬಂದ ಎರಡನೇ ಅಲೆ ಇದ್ದಬದ್ದ ಬದುಕುವ ಆಸೆಯನ್ನು ಚಿವುಟಿಹಾಕಿತು. ಇದು ಸಾಲದೆಂಬಂತೆ ಸರ್ಕಾರಗಳ ಆರ್ಥಿಕ ನೀತಿಯಿಂದಾಗಿ ಅಗತ್ಯ ವಸ್ತುಗಳ ಬೆಲೆಏರಿಕೆ ಜನಜೀವನವನ್ನು ಹೈರಾಣಾಗಿಸಿದೆ. ಇಡೀ ದೇಶದಲ್ಲಿ ನಿರುದ್ಯೋಗದಿಂದಾಗಿ ಬೇಸತ್ತು ಖಿನ್ನತೆಗೆ ಒಳಗಾಗಿ ಸಾಯುವವರ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲಿ ಕರ್ನಾಟಕಕ್ಕೆ ಮೊದಲನೇ ಸ್ಥಾನ….!
ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ೩ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿಬಿದ್ದಿವೆ. ಖಾಲಿ ಆಗುತ್ತಲೇ ಇವೆ. ಶಿಕ್ಷಣ, ಆರೋಗ್ಯ, ವಸತಿ, ಇಂಧನ ಸೇರಿದಂತೆ ಮೂಲಭೂತ ವಲಯಗಳಲ್ಲಿ ಅವಶ್ಯಕ ಸಂಖ್ಯೆಯಲ್ಲಿ ನೇಮಕಾತಿಗಳು ನಡೆದಿಲ್ಲ. ಖಾಲಿ ಬಿದ್ದಿರುವ ಹುದ್ದೆಗಳ ಭರ್ತಿಗೆ ಯಾವುದೇ ಪ್ರಯತ್ನ ಮಾಡದೇ, ದಿನಗೂಲಿ, ಗುತ್ತಿಗೆ, ಅರೆ-ಗುತ್ತಿಗೆ, ಅತಿಥಿ ಮುಂತಾದ ಹೆಸರಿನಲ್ಲಿ ಪುಡಿಗಾಸಿಗೆ ದುಡಿಸಿಕೊಳ್ಳುತ್ತಿದ್ದಾರೆ. ಅರ್ಜಿ ಶುಲ್ಕದ ಮೂಲಕ ಹಣ ಸಂಗ್ರಹಿಸಲು ಎಂದೋ ನಡೆಯುವ ಅಲ್ಪಸ್ವಲ್ಪ ನೇಮಕಾತಿಯ ಪ್ರಹಸನ ನಿಧಾನಗತಿಯಲ್ಲಿ ಸಾಗುತ್ತಿದೆ. ೨೦೧೬ರಿಂದ ೨೦೨೧ರವರೆಗೂ ರಾಜ್ಯದ ವಿವಿಧ ಇಲಾಖೆಯಲ್ಲಿ ನೇಮಕಾತಿಗಾಗಿ ಸುಮಾರು ೧೯ ಭಾರಿ ಅಧಿಸೂಚನೆ ಹೊರಬಿದ್ದು ಆಯ್ಕೆ ಪ್ರಕ್ರಿಯೆಯೂ ಮುಗಿದಿವೆ. ಆದರೆ ಯಾರಿಗೂ ಆರ್ಡರ್ ಕಾಪಿ ಕೈಗೆ ಸಿಕ್ಕಿ ಕೆಲಸಕ್ಕೆ ಸೇರಿಲ್ಲ. ಅಲ್ಲದೇ ೨೦೧೯-೨೦ರಲ್ಲಿ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಅರ್ಜಿ ಕರೆದು, ೨೮.೦೨.೨೦೨೧ರಂದು ಪರೀಕ್ಷೆ ನಡೆಸಿದ್ದಾರೆ. ಇಲ್ಲಿಯವರೆಗೂ ಫಲಿತಾಂಶ ಬಂದಿಲ್ಲ. ಹಾಗೂ ೨೦೧೯-೨೦ರಲ್ಲಿ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಅರ್ಜಿ ಕರೆದು ಇನ್ನೂ ಪರೀಕ್ಷೆ ನಡೆದಿಲ್ಲ.
ಆರೋಗ್ಯ ಕ್ಷೇತ್ರದಲ್ಲಿ ಬಿಎಸ್ಸಿ, ನರ್ಸಿಂಗ್, ಪ್ಯಾರಾಮೆಡಿಕಲ್, ಫಾರ್ಮಸಿ, ಕೋರ್ಸ್ ಮುಗಿಸಿ, ಗುತ್ತಿಗೆ ಹೊರಗುತ್ತಿಗೆ ಆಧಾರದಲ್ಲಿ ಪುಡಿಗಾಸಿಗೆ ದುಡಿಯುತ್ತಿದ್ದಾರೆ. ಕೊರೋನ ಅವಧಿಯಲ್ಲಂತೂ ಇವರು ಜೀವಪಣಕ್ಕಿಟ್ಟು ದುಡಿದಿದ್ದಾರೆ. ಇವರ ಸೇವೆಯು ಯಾವ ಕಾರಣಕ್ಕೂ ಮರೆಯುವಂತದ್ದಲ್ಲ. ಹೃದಯಹೀನ ಸರ್ಕಾರ ಕೊರೋನ ನಂತರ ಅವರನ್ನು ಕೆಲಸದಿಂದ ಕೈ ಬಿಡುತ್ತಿದೆ. ಇನ್ನು ಅತಿಥಿ ಉಪನ್ಯಾಸಕರದ್ದು ಮಾಸ್ಟರ್ ಡಿಗ್ರಿ, P. H. D, M.PHILL ಓದಿ ೧೧ರಿಂದ೧೩ ಸಾವಿರಕ್ಕೆ ದುಡಿಯುವ ಹೀನಾಯ ಪರಿಸ್ಥಿತಿ. ಉದ್ಯೋಗದ ಭದ್ರತೆ ಇಲ್ಲ. ದುಡಿದ ಸಂಬಳ ಸಮಯಕ್ಕೆ ಸರಿಯಾಗಿ ತಲುಪುತ್ತಿಲ್ಲ. ಜೀವನ ಸರಿದೂಗಿಸಲು ಆ ಕೆಲಸದ ಜೊತೆಗೆ ಯಾವ್ಯಾವುದೋ ಕೆಲಸದಲ್ಲಿ ನಿರತರಾಗಿದ್ದಾರೆ. ಇದು ಅತಿಥಿದೇವೋಭವ ಎಂದು ಹೊಗಳಿಸಿಕೊಂಡ ಉಪನ್ಯಾಸಕರ ಸಂಕಷ್ಟ. ಹಾಗೆ ಐಟಿಐ ಅತಿಥಿ ಬೋಧಕರದ್ದು ಡಿಪ್ಲೋಮಾ, ಇಂಜಿನಿಯರಿಂಗ್ ಕೋರ್ಸ್ ಮುಗಿಸಿಕೊಂಡು ೮-೯ ಸಾವಿರಕ್ಕೆ ದುಡಿಯುವ ಅವಸ್ಥೆ! ಇವರು ೬ ರಿಂದ ೭ ಗಂಟೆ ಕಾಲೇಜಿನಲ್ಲೇ ಇರುವುದರಿಂದ ಬೇರೊಂದು ಕೆಲಸವನ್ನೂ ಮಾಡಲು ಸಾಧ್ಯವಿಲ್ಲ. ಐಟಿಐ ಕಾಲೇಜ್‌ಗಳು ಕಾಯಂ ಸಿಬ್ಬಂದಿ ಇಲ್ಲದೆ ಅತಿಥಿ ಬೋಧಕರನ್ನೇ ಅವಲಂಬಿಸಿವೆ. ಇದು ಇಲಾಖೆಯ ಜೆಡಿ ಮತ್ತು ಕಮಿಷನರ್‌ಗಳಿಗೂ ಗೊತ್ತು. ಆದರೂ ಸಂಬಳ ಹೆಚ್ಚಿಸಿಲ್ಲ, ಉದ್ಯೋಗ ಭದ್ರತೆ ನೀಡಿಲ್ಲ, ಲಾಕ್ಡೌನ್ ಅವಧಿಯ ಸಂಬಳ ಪಡೆಯಲು ತಿಂಗಳುಗಟ್ಟಲೆ ಇಲಾಖೆಗೆ ಅಲೆದದ್ದೇ ಆಯಿತು. ಆನ್ಲೈನ್ ಪ್ರತಿಭಟನೆ ಮತ್ತು ರಾಜ್ಯ ಸಮಾವೇಶದ ನಂತರ ಮನವಿಪತ್ರ ನೀಡಿದ್ದೂ ಆಗಿದೆ. ಇನ್ನು ಸಂಬಳ ಬಂದಿಲ್ಲ. ವಸತಿ ಶಾಲೆಗಳಲ್ಲಿ ದುಡಿಯುವ ಅತಿಥಿ ಶಿಕ್ಷಕರ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಮಕ್ಕಳ ಸರ್ವತೋಮುಖ ಪ್ರಗತಿಗಾಗಿ ಕಲೆ, ಸಂಗೀತ, ರಂಗಶಿಕ್ಷಣವು ತುಂಬಾ ಮುಖ್ಯವೆಂದು ಶಿಕ್ಷಣ ತಜ್ಞರು ಮಾತ್ರವಲ್ಲದೇ ಸರ್ಕಾರದ ಆಯೋಗಗಳೂ ಸಹ ವರದಿಮಾಡಿವೆ. ಆದರೆ ಈ ಕ್ಷೇತ್ರಗಳನ್ನು ಸಂಪೂರ್ಣವಾಗಿ ಕಡೆಗಣಿಸಿ ಎಷ್ಟೋ ವರ್ಷಗಳಾಗಿದೆ. ಹಾಗಾಗಿ ಇಂದು ವಿದ್ಯಾರ್ಥಿಗಳ ಜ್ಞಾನಾರ್ಜನೆಯನ್ನು ಮಾಹಿತಿ ಸಂಗ್ರಹಣೆಯ ಕಂಪ್ಯೂಟರ್‌ಗಳ ಮಟ್ಟಕ್ಕೆ ಇಳಿಸಿದ್ದಾರೆ.
ವಿದೇಶಗಳಿಂದ ಸಾವಿರಾರು ಕೋಟಿ ರೂಪಾಯಿ ಬಂಡವಾಳ ಹರಿದು ಬರುತ್ತಿದೆ. ಉದ್ಯೋಗಗಳು ಸೃಷ್ಟಿಯಾಗುತ್ತಿವೆ ಎಂದು ಹೇಳುವಾಗ, ನಮ್ಮ ಅಧಿಕಾರಸ್ಥರು ಏಕೆ ಕೋಟ್ಯಾಂತರ ದುಡಿಯುವ ಜನ ಈ ಪರಿ ಸಮಸ್ಯೆಗಳ ಕೂಪದಲ್ಲಿ ಮಳುಗಿದ್ದಾರೆ ಎಂಬ ಪ್ರಶ್ನೆಗೆ ಜಾಣ ಕಿವುಡನ್ನು ಪ್ರದರ್ಶಿಸುತ್ತಾರೆ. ಸರ್ಕಾರ ಉದ್ಯೋಗ ಸೃಷ್ಟಿಗಾಗಿ ಬಂಡವಾಳ ಹೂಡುವುದನ್ನು ನಿಲ್ಲಿಸಿ ಯಾವುದೋ ಕಾಲವಾಗಿದೆ. ಇನ್ನೊಂದೆಡೆ ವ್ಯಾಪಕ ಖಾಸಗೀಕರಣ ಪ್ರಕ್ರಿಯೆ ನಡೆಯುತ್ತಿದೆ. ಈ ಎಲ್ಲಾ ಕಾರಣಗಳಿಂದಾಗಿ ನಿರುದ್ಯೋಗವು ಭೂತಾಕಾರವಾಗಿ ಬೆಳೆದು, ಇಡೀ ದೇಶದ ಸಂಪತ್ತನ್ನು ಸೃಷ್ಟಿಸುವ ದುಡಿಯುವ ಕೈಗಳು ತಮ್ಮ ಕತ್ತನ್ನೇ ಹಿಸುಕಿಕೊಂಡು ಆತ್ಮಹತ್ಯೆಗೆ ಮರೆಹೋಗುತ್ತಿವೆ.
ಹಾಗಾಗಿ ಇಂದು ನಡೆದ ಅಖಿಲ ಭಾರತ ಬೇಡಿಕೆದಿನದಂದು ಈ ಮನವಿಪತ್ರದ ಮೂಲಕ ನಾವು ಅಖಿಲ ಭಾರತ ನಿರುದ್ಯೋಗಿ ಯುವ ಸಮೂಹದ ಪರವಾಗಿ ಮೇಲೆ ತಿಳಿಸಿದ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಲು ಮತ್ತು ಈ ಕೆಳಗಿನ ಬೇಡಿಕೆಗಳನ್ನು ಯಾವುದೇ ವಿಳಂಬವಿಲ್ಲದೆ ಪರಿಹರಿಸಬೇಕು ಎಂದು ನಾವು ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತೇವೆ.
ಬೇಡಿಕೆಗಳು :
ನೇಮಕಾತಿ ಪ್ರಕ್ರಿಯೆಯನ್ನು ಚುರುಕುಗೊಳಿಸಿ ಮತ್ತು ೨೦೨೧ರೊಳಗೆ ಸರ್ಕಾರಿ ಕ್ಷೇತ್ರಗಳಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಿ.
ರಾಜ್ಯ ಸರ್ಕಾರದಿಂದ ತಡೆಹಿಡಿದ ಎಲ್ಲ ನೇಮಕಾತಿ ಪ್ರಕ್ರಿಯೆಗಳನ್ನು ಈ ಕೂಡಲೇ ಪುನರ್ ಆರಂಭಿಸಿ. ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿಗೊಳಿಸಿ.
೨೦೨೦ರಲ್ಲಿ ಆರಂಭವಾದ ಪ್ರಥಮ/ದ್ವಿತೀಯ ದರ್ಜೆ ಸಹಾಯಕರ ನೇಮಕಾತಿ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ನೇಮಕಪತ್ರವನ್ನು ನೀಡಿ.
ಸರ್ಕಾರಿ ಐಟಿಐಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಅತಿಥಿ ಬೋಧಕರ ಲಾಕ್ಡೌನ್ ಅವಧಿಯ ವೇತನವನ್ನು ಕೂಡಲೇ ಬಿಡುಗಡೆ ಮಾಡಿ ಹಾಗೂ ಸೇವಾಭದ್ರತೆ ಒದಗಿಸಿ.
ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಸೇವಾಭದ್ರತೆ ಒದಗಿಸಿ.
ಆರೋಗ್ಯ ಇಲಾಖೆಯಲ್ಲಿ ಕೋವಿಡ್ ಡ್ಯೂಟಿ ಸೇರಿದಂತೆ ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದಲ್ಲಿ ಸೇವೆಸಲ್ಲಿಸುತ್ತಿರುವ ಶುಶ್ರೂಷಕರು, ಲ್ಯಾಬ್ ಟೆಕ್ನಿಷಿಯನ್ಸ್ , ಆರೋಗ್ಯ ನಿರೀಕ್ಷಣಾಧಿಕಾರಿಗಳು, ಸಮುದಾಯ ಆರೋಗ್ಯಾಧಿಕಾರಿಗಳು, ಡಿ-ಗ್ರೂಪ್ ನೌಕರರು ಸೇರಿದಂತೆ ಅರೆವೈದ್ಯಕೀಯ ಸಿಬ್ಬಂದಿಗಳನ್ನು ಖಾಯಂಗೊಳಿಸಿ.
ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಅರಳಿಸಲು ಎಲ್ಲಾ ಶಾಲೆಗಳಲ್ಲಿ ಸಂಗೀತ ಶಿಕ್ಷಕರು, ರಂಗ ಶಿಕ್ಷಕರು, ಚಿತ್ರಕಲಾ ಶಿಕ್ಷಕರು ಮತ್ತು ದೈಹಿಕ ಶಿಕ್ಷಕರನ್ನು ನೇಮಕ ಮಾಡಿ.
KPSC ಯಲ್ಲಿ ನಡೆಯುವ ಭ್ರಷ್ಟಾಚಾರ ಹಾಗೂ ಅಕ್ರಮಗಳನ್ನು ತಡೆಗಟ್ಟಿ.
ಕಟ್ಟಡ ಕಾರ್ಮಿಕ ಕಲ್ಯಾಣ ನಿಧಿಯ ದುರುಪಯೋಗವನ್ನು ನಿಲ್ಲಿಸಿ. ಪ್ರತಿಭಟನಾಕಾರರುು ಆಗ್ರಹಿಸಿದ್ದಾರೆೆ

ಸಮಿತಿಯ ಅಖಿಲ ಭಾರತ ಅಧ್ಯಕ್ಷರಾದ ಎಂ ಉಮಾದೇವಿ ಮೈಸೂರು ಜಿಲ್ಲೆಯ ಮುಖಂಡರುಗಳಾದ ಅಭಿನಂದನ್ ,ನಿತ್ಯಶ್ರೀ ,ಸುಮ ಸೂರ್ಯ ಸಂಜು ,ರೆಹನಾ ,ಆಯೇಶ, ಸುಬಾನ್ ಭಾಗವಹಿಸಿದ್ದರು

 


Share