ನಿಸಾರ್ ಅಹಮದ್ ಅಗಲಿಕೆಗೆ ಗಣ್ಯರ ಸಂತಾಪ

702
Share

ನಿತ್ಯೋತ್ಸವ ಕವಿ ಎಂದೇ ಕರೆಯಲ್ಪಡುವ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಅವರ ಕೊಡುಗೆ ಅಪಾರ. ಇವರ ನಿತ್ಯೋತ್ಸವ ಹಾಡು ಕರ್ನಾಟಕದಲ್ಲಿ ಮನೆಮಾತಾಗಿತ್ತು. ಇವರನ್ನು ಕೇಂದ್ರ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಪಂಪ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಅರಸಿ ಬಂದಿವೆ. ಇವರ ನಿಧನ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ. ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ.

ಎಸ್.ಟಿ.ಸೋಮಶೇಖರ್
ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು

ಜೋಗದ ಸೊರಿಯನ್ನು ನಯಾಗರದಾಚೆಗೂ ದಾಟಿಸಿದ ಕವಿ, ಸಮಾಜವನ್ನು ಕುರಿ ಮಂದೆಯಾಗದಂತೆ ಶಬ್ದಗಳಲ್ಲೇ ಎಚ್ಚರಿಸಿದವ ಸಂತ ಸದೃಶ-ಸಂವೇದನಾಶೀಲ. ಸೂಟು ಬೂಟು ಧಿರಿಸಿನ ಅಪ್ಪಟ ಮೈಸೂರು ಪೇಟದ ಮನಸ್ಸಿನ ನಿಸಾರ ಅಹಮದ್ ಅವರ ದೇಹಾಂತ ಕನ್ನಡಮ್ಮನ ಮಕ್ಕಳಿಗೆ ತುಂಬಲಾರದ ನೋವು. ಅವರು ಬರೆಯುತ್ತಿರಲಿ, ಬರೆಯದೇ ಇರುತ್ತಿರಲಿ ನಿಸಾರರ ಉಪಸ್ಥಿತಿ ಕನ್ನಡಕ್ಕೊಂದು ಧೈರ್ಯ ವನ್ನು ತುಂಬುತ್ತಿತ್ತು. ಇನ್ನವರ ಸಾಲುಗಳು ನಮ್ನನ್ನು ಸದಾ ಎಚ್ಚರಿಸುತ್ತಿರಲಿ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

ಸುಮಲತಾ ಅಂಬರೀಶ್ ಸಚಿವರು


ಕನ್ನಡ ಸಾಹಿತ್ಯ ಲೋಕದ ದಿಗ್ಗಜ, ಕವಿ ಕೆ.ಎಸ್. ನಿಸಾರ್ ಅಹಮದ್ ಅವರ ನಿಧನಕ್ಕೆ ಚಾಮರಾಜನಗರ ಕ್ಷೇತ್ರದ ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸಪ್ರಸಾದ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.

ನಿತ್ಯೋತ್ಸವ ಕವಿ ಎಂದೇ ಚಿರಪರಿಚಿತರಾಗಿದ್ದ ನಿಸಾರ್ ಅಹಮದ್ ಅವರು ಅನೇಕ ಕವನ ಸಂಕಲನಗಳು, ಮಕ್ಕಳ ಸಾಹಿತ್ಯ, ಅನುವಾದ, ಸಂಪಾದನಾ, ವೈಚಾರಿಕ ಕೃತಿಗಳನ್ನು ಹೊರತಂದಿದ್ದಾರೆ. ಕೇಂದ್ರ ಸಾಹಿತ್ಯ ಆಕಾಡಮಿ, ನಾಡೋಜ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಇನ್ನೂ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

ಸಂವೇದನಾ ಶೀಲ, ಜನಪ್ರಿಯ ಕನ್ನಡದ ಧೀಮಂತ ಕವಿ ನಿಸಾರ್ ಅಹಮದ್ ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ನಷ್ಟವಾಗಿದೆ. ಅವರ ಅಗಲಿಕೆಯ ದು:ಖ ಭರಿಸುವ ಶಕ್ತಿ ಅವರ ಕುಟುಂಬಕ್ಕೆ ಲಭಿಸಲಿ ಎಂದು ಪ್ರಾರ್ಥಿಸುವುದಾಗಿ ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸಪ್ರಸಾದ್ ಅವರು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

ಚಾಮರಾಜನಗರ ಕ್ಷೇತ್ರದ ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸಪ್ರಸಾದ್

ಪ್ರಾಧ್ಯಾಪಕರಾಗಿ, ಭೂ ವಿಜ್ಞಾನಿಯಾಗಿಯೂ ಸೇವೆಯನ್ನು ಸಲ್ಲಿಸಿದ್ದ ಕನ್ನಡದ ನಿತ್ಯೋತ್ಸವ ಕವಿಗಳಾದ ಕೆ.ಎಸ್.ನಿಸಾರ್ ಅಹಮ್ಮದ್ ರವರು ಇಂದು ನಮ್ಮನ್ನೆಲ್ಲಾ ಅಗಲಿದ್ದಾರೆ.

ಕನ್ನಡದ ನೆಲ-ಜಲವನ್ನು ಕಣ್ಣಿಗೆ ಕಟ್ಟುವಂತೆ ಕವನಗಳ ಮೂಲಕ ಮೂಡಿಸಿ, ಕನ್ನಡ ಪ್ರೇಮವನ್ನು ಉದ್ದೀಪನಗೊಳಿಸಿದ ಕನ್ನಡಿಗರ ಪ್ರೀತಿಯ ನಿತ್ಯೋತ್ಸವ ಕವಿ ಕೆ.ಎಸ್. ನಿಸಾರ್ ಅಹಮ್ಮದ್.

ಕನ್ನಡವನ್ನು ಹೂವಿನಂತೆ ಚಂದಗೊಳಿಸಿದ ಕೆ.ಎಸ್. ನಿಸಾರ್ ಅಹಮ್ಮದ್ ರವರ ನಿಧನ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.

ಹಿರಿಯ ಸಾಹಿತಿಗಳಾದ ಕೆ.ಎಸ್. ನಿಸಾರ್ ಅಹಮದ್ ರವರ ನಿಧನ ಅವರ ಕುಟುಂಬ ವರ್ಗಕ್ಕೆ ಹಾಗೂ ಸಮಸ್ತ ಕನ್ನಡ ಕುಲಕೋಟಿಗೆ ದುಖಃವನ್ನು ಭರಿಸುವ ಶಕ್ತಿಯನ್ನು ತಾಯಿ ಚಾಮುಂಡೇಶ್ವರಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

-ಜಿ.ಟಿ.ದೇವೇಗೌಡ
ಮಾಜಿ ಸಚಿವರು ಹಾಗೂ
ಶಾಸಕರು‌, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ, ಮೈಸೂರು


Share