ಮಾರ್ಚ್ ಒಳಗೆ ಗುರಿಮುಟ್ಟಿ; ಬೆಂಗಳೂರು ಡಿಸಿಸಿ ಬ್ಯಾಂಕ್ ಗೆ ಸಚಿವರಾದ ಸೋಮಶೇಖರ್ ಸೂಚನೆ

262
Share

 

ಮಾರ್ಚ್ ಒಳಗೆ ಗುರಿಮುಟ್ಟಿ; ಬೆಂಗಳೂರು ಡಿಸಿಸಿ ಬ್ಯಾಂಕ್ ಗೆ ಸಚಿವರಾದ ಸೋಮಶೇಖರ್ ಸೂಚನೆ

* ಬಿಡಿಸಿಸಿ ಬ್ಯಾಂಕ್ ನ ಹೊಸಕೋಟೆ ಹಾಗೂ ದೇವನಹಳ್ಳಿ ಶಾಖೆಗಳಿಗೆ ಸಚಿವರ ಭೇಟಿ

* ಸಾಲ ವಿತರಣೆ ಬಗ್ಗೆ ಮಾಹಿತಿ ಸಂಗ್ರಹ, ತ್ವರಿತ ಗುರಿ ಮುಟ್ಟಲು ಸೂಚನೆ

* ಬಿಡಿಸಿಸಿ ಬ್ಯಾಂಕ್ ನಿಂದ ಈವರೆಗೆ 80 ಸಾವಿರ ರೈತರಿಗೆ 421 ಕೋಟಿ ರೂಪಾಯಿ ಸಾಲ ವಿತರಣೆ

ಹೊಸಕೋಟೆ/ದೇವನಹಳ್ಳಿ: ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿ., ಹೊಸಕೋಟೆ ಹಾಗೂ ದೇವನಹಳ್ಳಿ ಶಾಖೆಗಳಿಗೆ ಭೇಟಿ ನೀಡಿದ ಸಹಕಾರ ಸಚಿವರಾದ ಎಸ್‌.ಟಿ.ಸೋಮಶೇಖರ್ ಅವರು, ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ, ಪ್ರಗತಿ ಪರಿಶೀಲನೆ ನಡೆಸಿದರು.

ಡಿಸಿಸಿ ಬ್ಯಾಂಕ್ ಮುಖಾಂತರ ಯಾವ ಯಾವ ಸಾಲಗಳನ್ನು ನೀಡಲಾಗುತ್ತಿದೆ? ಬಡವರ ಬಂಧು, ಕಾಯಕ, ಎಸ್ಸಿಎಸ್ಟಿ ಯೋಜನೆಯಡಿ ಸಾಲ ನೀಡಿಕೆ ಹಾಗೂ ಮರುಪಾವತಿ ಬಗ್ಗೆ ಮಾಹಿತಿಯನ್ನು ಅಧಿಕಾರಿಗಳಿಂದ ಸಚಿವರು ಪಡೆದುಕೊಂಡರು.

ಮಾರ್ಚ್ ಒಳಗೆ ಗುರಿಮುಟ್ಟಿ; ಬೆಂಗಳೂರು ಡಿಸಿಸಿ ಬ್ಯಾಂಕ್ ಗೆ ಸೂಚನೆ

ಬೆಂಗಳೂರಿನ ಚಾಮರಾಜನಗರದಲ್ಲಿರುವ ಡಿಸಿಸಿ ಬ್ಯಾಂಕ್ ಒಟ್ಟಾರೆಯಾಗಿ ವಿತರಣೆ ಮಾಡಿರುವ ಸಾಲ, ಮರುಪಾವತಿ ಹಾಗೂ ಹಾಕಿಕೊಂಡಿರುವ ಗುರಿಗಳ ಬಗ್ಗೆ ಸಚಿವರು ಮಾಹಿತಿ ಕೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಬ್ಯಾಂಕ್ ಅಧಿಕಾರಿಗಳು, ಪ್ರಸಕ್ತ ಸಾಲಿನಲ್ಲಿ 1 ಲಕ್ಷ ಮಂದಿಗೆ 550 ಕೋಟಿ ರೂಪಾಯಿ ಸಾಲ ನೀಡಬೇಕೆಂಬ ಗುರಿ ಹೊಂದಲಾಗಿತ್ತು. ಈವರೆಗೆ 80060 ರೈತರಿಗೆ
421 ಕೋಟಿ ರೂಪಾಯಿ ಸಾಲ ವಿತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಹಾಕಿಕೊಂಡ ಗುರಿಮುಟ್ಟಿ

ಇದೇ ಮಾರ್ಚ್ ಒಳಗೆ ಹಾಕಿಕೊಂಡ ಗುರಿ ಮುಟ್ಟುವ ಮೂಲಕ ಶೇ. 100ರಷ್ಟು ಸಾಲ ವಿತರಣೆಯಾಗಬೇಕು ಎಂದು ಸೂಚನೆ ನೀಡಿದ ಸಚಿವರು, ಬ್ಯಾಂಕ್ ಗಳ ಪ್ರಗತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹೊಸಕೋಟೆ ಡಿಸಿಸಿ ಬ್ಯಾಂಕ್ ಉತ್ತಮ ಗುರಿಯನ್ನು ಮುಟ್ಟಿದೆ. ಇದೇ ರೀತಿಯಾಗಿ ಮುಂದೆಯೂ ಕೆಲಸ ಮಾಡಲಿ ಎಂದು ಕಿವಿಮಾತು ಹೇಳಿದರು.

ಹೊಸಕೋಟೆ ಡಿಸಿಸಿ ಬ್ಯಾಂಕ್ ಗಳ ಸಾಲದ ವಿವರ

ಕೆಸಿಸಿ ಬೆಳೆ ಸಾಲ, ಮಧ್ಯಮಾವಧಿ ಸಾಲ (ಕುರಿ, ಕೋಳಿ, ಹಸು ಸಾಕಾಣಿಕೆ), ಚಿನ್ನಾಭರಣ ಸಾಲ, ವೇತನಾಧಾರ ಸಾಲ, ವಾಹನ ಸಾಲ, ಗೃಹ ಸಾಲ, ನಗದು ಸಾಲ, ನೇಕಾರಿಕೆ ಸಾಲ, ಸ್ತ್ರೀ ಸ್ವಸಹಾಯ ಸಂಘಗಳ ಸಾಲ, ಕೆಸಿಸಿ ಡೈರಿ ಸಾಲಗಳನ್ನು ನೀಡಲಾಗುತ್ತಿದ್ದು, ಹೊಸಕೋಟೆ ಶಾಖೆಯಲ್ಲಿ ಇದುವರೆಗೆ ನೀಡಿರುವ ಕೃಷಿ ಮತ್ತು ಕೃಷಿಯೇತರ ಸಾಲಗಳ ಮೊತ್ತ 34.60 ಕೋಟಿ ರೂಪಾಯಿಗಳಾಗಿವೆ ಎಂದು ಅಧಿಕಾರಿಗಳು ಸಚಿವರಾದ ಸೋಮಶೇಖರ್ ಅವರಿಗೆ ಮಾಹಿತಿ ನೀಡಿದರು.

ಇನ್ನು ಮಧ್ಯಮಾವಧಿ ಸಾಲದಡಿ ಹೈನುಗಾರಿಕೆಗೆ, ಕೋಳಿ ಸಾಕಾಣಿಕೆಗೆ, ಕುರಿ ಸಾಕಾಣಿಕೆಗೆ ಹಾಗೂ ನೇಕಾರಿಕೆಗೆ ಸಾಲ ನೀಡಲು ಹೆಚ್ಚಿನ ಆದ್ಯತೆ ಕೊಡಿ ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಯಾವ ವಿಭಾಗದಲ್ಲಿ ಸಾಲ ಮರುಪಾವತಿ ಅಷ್ಟಾಗಿ ಆಗುತ್ತಿಲ್ಲ ಎಂದು ಪ್ರಶ್ನಿಸಿದಾಗ, ವೇತನಾಧಾರಿತ ಸಾಲ ಮರುಪಾವತಿ ಸ್ವಲ್ಪ ವಿಳಂಬವಾಗುತ್ತಿದ್ದು, ಎಲ್ಲ ಶಾಖೆಗಳಿಂದ ಶೇ. 52ರಷ್ಟು ವಸೂಲಾತಿಯಾಗಿದೆ. ಇದಕ್ಕೆ ಹೆಚ್ಚಿನ ಪ್ರಯತ್ನ ಹಾಕಲಾಗುವುದು ಎಂದು ಮಾಹಿತಿ ನೀಡಿದರು.

ಬ್ಯಾಂಕ್ ನಗರ ಹಾಗೂ ಗ್ರಾಮಾಂತರ ಬಿಡಿಸಿಸಿ ಬ್ಯಾಂಕ್ ನ ಅಧ್ಯಕ್ಷರಾದ ಹನುಮಂತಯ್ಯ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಕೃಷ್ಣಮೂರ್ತಿ, ಪಟ್ಟಾಭಿರಾಮಯ್ಯ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.

 

ಟೌನ್ ಕೋ ಆಪರೇಟಿವ್ ಬ್ಯಾಂಕ್ ಗೆ ಭೇಟಿ

ಹೊಸಕೋಟೆ ದಿ ಟೌನ್ ಕೋ ಆಪರೇಟಿವ್ ಬ್ಯಾಂಕ್ ಕಚೇರಿಗೆ ಭೇಟಿ ನೀಡಿದ ಸಹಕಾರ ಸಚಿವರು, ಬ್ಯಾಂಕ್ ವ್ಯವಹಾರಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ರಸಗೊಬ್ಬರ ಗೋದಾಮು ಪರಿಶೀಲನೆ

ಹೊಸಕೋಟೆ ಟಿಎಪಿಸಿಎಂಎಸ್ ಶಾಖೆಗೆ ಭೇಟಿ ನೀಡಿದ ಸಚಿವರು, ಕಾರ್ಯವೈಖರಿ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಇದೇ ವೇಳೆ ಶಾಖೆಯ ರಸಗೊಬ್ಬರ ಗೋದಾಮುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೆಳೆ ಸಾಲ ವಿತರಣೆ ಸಾಧನೆ ಪರಿಶೀಲನೆಗೆ ಪ್ರವಾಸ; ಸಚಿವ ಎಸ್ ಟಿ ಎಸ್

* ಹೊಸಕೋಟೆ ಡಿಸಿಸಿ ಬ್ಯಾಂಕ್ ನಿಂದ ಉತ್ತಮ ಕಾರ್ಯನಿರ್ವಹಣೆ; ಸಚಿವರ ಮೆಚ್ಚುಗೆ

ಸಹಕಾರ ಇಲಾಖೆಯಿಂದ ಸುಮಾರು 24.50 ಲಕ್ಷ ರೈತರಿಗೆ 15300 ಕೋಟಿ ರೂಪಾಯಿ ಬೆಳೆ ಸಾಲ ನೀಡಬೇಕೆಂಬ ಗುರಿ ಹಾಕಿಕೊಳ್ಳಲಾಗಿದ್ದು, ಈ ನಿಟ್ಟಿನಲ್ಲಿ ಬಾಕಿ ಎಷ್ಟಿದೆ ಎಂದು ಖುದ್ದುಪರಿಶೀಲನೆಗೆ ಇಳಿದಿರುವುದಾಗಿ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.

ಹೊಸಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಈಗಾಗಲೇ 19.50 ಲಕ್ಷ ರೈತರಿಗೆ 12.50 ಸಾವಿರ ಕೋಟಿ ರೂಪಾಯಿ ಸಾಲವನ್ನು ವಿತರಣೆ ಮಾಡಲಾಗಿದೆ. ಯಾವ ಯಾವ ವಿಭಾಗದಲ್ಲಿ ಬಾಕಿ ಇದೆ? ಯಾವ ಸಾಲ ನೀಡಿಕೆಯಲ್ಲಿ ಹಿನ್ನಡೆಯಾಗಿದೆ? ಎಂಬ ಬಗ್ಗೆ ಮಾಹಿತಿ ಕಲೆಹಾಕಿ, ಶೀಘ್ರದಲ್ಲಿ ಗುರಿ ಮುಟ್ಟುವಂತೆ ಸೂಚನೆ ನೀಡುತ್ತಿದ್ದೇನೆ ಎಂದು ತಿಳಿಸಿದರು.

ಹೊಸಕೋಟೆ ಡಿಸಿಸಿ ಬ್ಯಾಂಕ್ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ. ನೂರಕ್ಕೆ ನೂರರಷ್ಟು ಮರುಪಾವತಿಯಾಗುತ್ತಿದೆ ಎಂದು ಸಚಿವರು ಇದೇ ಸಂದರ್ಭದಲ್ಲಿ ಸಂತಸ ವ್ಯಕ್ತಪಡಿಸಿದರು.

ಸಹಕಾರ ರಂಗದಲ್ಲಿ ಉತ್ತಮ ತಂಡ; ಸಚಿವರ ಶ್ಲಾಘನೆ

ಪಕ್ಷಭೇದ ಮರೆತು ತಂಡವಾಗಿ ಕಾರ್ಯನಿರ್ವಹಣೆ ಮಾಡಲಾಗುತ್ತಿದೆ. ಸಹಕಾರ ಇಲಾಖೆಯಲ್ಲಿ ಯಾವುದೇ ಪಕ್ಷ ಭೇದ ಇರುವುದಿಲ್ಲ. ಇದೇ ಮೊದಲ ಬಾರಿಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನವರು ಆಯ್ಕೆಯಾಗಿದ್ದರೂ ಒಟ್ಟಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಇದೇ ರೀತಿ ತಂಡ ಮುಂದುವರಿದರೆ ಸಹಕಾರ ಇಲಾಖೆ ಶೇಕಡಾ 100ರಷ್ಟು ಸಾಧನೆ ಮಾಡಲಿದೆ ಎಂದು ಸಚಿವರಾದ ಸೋಮಶೇಖರ್ ಹೇಳಿದರು.

ಹೈನುಗಾರಿಕೆಗೆ 2 ಲಕ್ಷ ರೂಪಾಯಿ ಸಾಲವನ್ನು ಆತ್ಮನಿರ್ಭರ ಅಡಿ ನೀಡಲಾಗುತ್ತಿದೆ. ರೈತರಿಗೆ ಯಾವುದೇ ರೀತಿಯಲ್ಲಿ ರಸಗೊಬ್ಬರಕ್ಕೆ ತೊಂದರೆಯಾಗುತ್ತಿಲ್ಲ. ಎಲ್ಲವನ್ನೂ ಸರಾಗವಾಗಿ ನಡೆಸಿಕೊಂಡು ಹೋಗಲಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

 

*ಸಹಕಾರಿ ನಡಿಗೆ ಡಿಸಿಸಿ ಬ್ಯಾಂಕ್ ಕಡೆಗೆ; ಸಚಿವ ಎಸ್ ಟಿ ಎಸ್*

• 24.50 ಲಕ್ಷ ರೈತರಿಗೆ ಶೀಘ್ರ 15,300 ಕೋಟಿ ವಿತರಣೆ
• ಫೆಬ್ರವರಿ ಮಾಸಾಂತ್ಯದೊಳಗೆ ಸಂಪೂರ್ಣ ಸಾಲ ವಿತರಣೆ ಗುರಿ
• ನೂರಕ್ಕೆ ನೂರು ಗುರಿ ಮುಟ್ಟುವತ್ತ ಹೆಜ್ಜೆ
• ಈಗಾಗಲೇ ಮಂಡ್ಯದ ಪಾಂಡವಪುರ, ನಾಗಮಂಗಲ, ಮೈಸೂರಿನ ಟಿ.ನರಸೀಪುರ ಡಿಸಿಸಿ ಬ್ಯಾಂಕ್ ಶಾಖೆಗಳಿಗೆ ಭೇಟಿ ಪರಿಶೀಲನೆ
• ಇಂದು ಬೆಂಗಳೂರು ಗ್ರಾಮಾಂತರದ ಹೊಸಪೇಟೆ, ದೇವನಹಳ್ಳಿ ಡಿಸಿಸಿ ಬ್ಯಾಂಕ್ ಶಾಖೆಗಳಿಗೆ ಭೇಟಿ, ಪರಿಶೀಲನೆ

ನಮ್ಮದು ಜನಪರ, ರೈತಪರ ಸರ್ಕಾರ. ನನ್ನದು ಸಹಕಾರ ಕೊಡುವ ಇಲಾಖೆ. ಹೀಗಾಗಿ ಕೊಟ್ಟ ಮಾತಿಗೆ ತಪ್ಪುವ ಪ್ರಶ್ನೆಯೇ ಇಲ್ಲ. ಪ್ರಸಕ್ತ ಸಾಲಿನಲ್ಲಿ ರೈತರಿಗೆ ನೀಡಬೇಕೆಂದಿರುವ ಬೆಳೆ ಸಾಲದ ಗುರಿಯನ್ನು ತಲುಪಲೇಬೇಕು ಎಂಬ ನಿಟ್ಟಿನಲ್ಲಿ *“ಸಹಕಾರಿ ನಡಿಗೆ ಡಿಸಿಸಿ ಬ್ಯಾಂಕ್ ಕಡೆಗೆ’’* ಎಂಬ ರೀತಿಯಲ್ಲಿ ಹೆಜ್ಜೆ ಹಾಕುತ್ತಿದ್ದೇನೆ. ಎಲ್ಲ ಅಂಕಿ-ಅಂಶಗಳ ಪಡೆಯುತ್ತಿದ್ದೇನೆ.

ಹೌದು. ಕೊರೋನಾ ಸಂಕಷ್ಟದ ಕಾಲದಲ್ಲಿ ಸಾಲ ಕೊಡುವುದೇ ಕಷ್ಟ ಎಂಬ ಸ್ಥಿತಿಯಲ್ಲಿಯೂ ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರ ಇಚ್ಛೆಯಂತೆ ಕಳೆದ ವರ್ಷಕ್ಕಿಂತ ಒಂದೂವರೆ ಸಾವಿರ ಕೋಟಿಗೂ ಅಧಿಕ ಅಂದರೆ 15,300 ಕೋಟಿ ರೂಪಾಯಿ ಸಾಲ ನೀಡುವ ಗುರಿಯನ್ನು ಹಾಕಿಕೊಂಡಿದ್ದೆವು. ಒಟ್ಟು 24.50 ಲಕ್ಷ ರೈತರಿಗೆ ಸಾಲ ವಿತರಣೆ ಮಾಡುವ ಹೊಣೆಯನ್ನು ಅಪೆಕ್ಸ್, 21 ಡಿಸಿಸಿ ಬ್ಯಾಂಕ್ ಹಾಗೂ ಪ್ಯಾಕ್ಸ್ ಗಳಿಗೆ ವಹಿಸಲಾಗಿತ್ತು. ಈಗಾಗಲೇ 1917334 ರೈತರಿಗೆ 12420.10 ಕೋಟಿ ರೂಪಾಯಿ ಸಾಲ ವಿತರಣೆ ಮಾಡಲಾಗಿದೆ. ಇದು ಹೆಮ್ಮೆಯ ವಿಷಯವೇ ಸರಿ.

19.17 ಲಕ್ಷ ರೈತರಿಗೆ 12420 ಕೋಟಿ ರೂಪಾಯಿ ಸಾಲವನ್ನು ನೀಡುವಲ್ಲಿ ಡಿಸಿಸಿ ಬ್ಯಾಂಕ್ ಗಳ ಸಹಿತ ಸಹಕಾರಿ ಸಂಸ್ಥೆಗಳ ಪಾತ್ರ ಬಹಳವೇ ಇದೆ. ಆದರೆ, ಒಟ್ಟಾರೆ 24.50 ಲಕ್ಷ ರೈತರಲ್ಲಿ ಇನ್ನು 5.33 ಲಕ್ಷ ರೈತರಿಗೆ 2,880 ಕೋಟಿ ರೂಪಾಯಿ ಮಾತ್ರ ಸಾಲ ವಿತರಣೆ ಬಾಕಿ ಇದ್ದು, ಇದನ್ನೂ ಸಹ ಇದೇ ಫೆಬ್ರವರಿ ಮಾಸಾಂತ್ಯದೊಳಗೆ ಮುಟ್ಟಬೇಕೆಂಬ ಗುರಿಯನ್ನು ಹಾಕಿಕೊಂಡಿದ್ದೇನೆ.

ಎಲ್ಲ ರೈತ ಫಲಾನುಭವಿಗಳಿಗೂ ಸಾಲ ಸಿಗಬೇಕೆಂಬ ಸದುದ್ದೇಶದಿಂದ ಈಗ ನಾನು ನನ್ನ ಪ್ರವಾಸದ ವೇಳೆ ಇದಕ್ಕಾಗಿಯೂ ಹೆಚ್ಚಿನ ಸಮಯವನ್ನು ಮೀಸಲಿಡುತ್ತಿದ್ದೇನೆ. ಪ್ರತಿ ಜಿಲ್ಲೆಗಳಿಗೆ ಭೇಟಿ ನೀಡಿದಂತಹ ಸಂದರ್ಭದಲ್ಲಿಯೂ ಡಿಸಿಸಿ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇನೆ. ಇದರ ಭಾಗವಾಗಿ ಈಗಾಗಲೇ ಮಂಡ್ಯದ ಪಾಂಡವಪುರ, ನಾಗಮಂಗಲ, ಮೈಸೂರಿನ ಟಿ.ನರಸೀಪುರ ಡಿಸಿಸಿ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡಿ, ಸಭೆ ನಡೆಸಿದ್ದೇನೆ. ಇಂದು ಬೆಂಗಳೂರು ಗ್ರಾಮಾಂತರದ ಹೊಸಪೇಟೆ, ದೇವನಹಳ್ಳಿ ಡಿಸಿಸಿ ಬ್ಯಾಂಕ್ ಶಾಖೆಗಳಿಗೆ ಭೇಟಿ, ಪರಿಶೀಲನೆ ನಡೆಸಿ ಸಂಪೂರ್ಣ ಮಾಹಿತಿ ಪಡೆದು ಸೂಕ್ತ ಮಾರ್ಗದರ್ಶನ, ಸೂಚನೆ ನೀಡಿದ್ದೇನೆ.

ರೈತರಿಗೆ ಎಷ್ಟು ಪ್ರಮಾಣದಲ್ಲಿ, ಯಾವ ಯಾವ ವಿಭಾಗದಲ್ಲಿ ಸಾಲ ನೀಡಲಾಗಿದೆ. ಬಡವರ ಬಂಧು, ಕಾಯಕ, ಎಸ್ ಸಿ ಎಸ್ ಟಿ ಯೋಜನೆಗಳಿಗೆ ಸಾಲ ನೀಡಿಕೆ ಪ್ರಮಾಣ ಹೇಗಿದೆ ಎಂಬಿತ್ಯಾದಿ ಎಲ್ಲ ವಿಷಯಗಳ ಬಗ್ಗೆ ಅಧಿಕಾರಿಗಳಿಂದ ಈ ಸಂದರ್ಭದಲ್ಲಿ ಮಾಹಿತಿ ಪಡೆಯುತ್ತಿದ್ದೇನೆ. ಜೊತೆಗೆ ಶೀಘ್ರದಲ್ಲಿ ಗುರಿಯನ್ನು ತಲುಪುವಂತೆಯೂ ಸೂಚನೆ ನೀಡುತ್ತಾ ಬರುತ್ತಿದ್ದೇನೆ. ನೂರಕ್ಕೆ ನೂರು ಗುರಿ ಮುಟ್ಟುವ ವಿಶ್ವಾಸ ನನಗಿದೆ. ಎಂದು ತಿಳಿಸಿದ್ದಾರೆ

*

 


Share