ವೃತ್ತಿಜೀವನದ ಈಚೆಗೂ ಸಹೋದ್ಯೋಗಿಗಳೊಂದಿಗೆ ಸೌಹಾರ್ದಯುತ ಸಂಬಂಧ ಮುಖ್ಯ: ಜಾವಗಲ್ ಶ್ರೀನಾಥ್
ಮೈಸೂರು: ವೃತ್ತಿಜೀವನದ ಈಚೆಗೂ ಸಹೋದ್ಯೋಗಿಗಳೊಂದಿಗೆ ಸಮಯ ಕಳೆಯುವುದು, ಆತ್ಮೀಯವಾಗಿರುವುದು ಬಹಳ ಮುಖ್ಯವಾಗುತ್ತದೆ. ಇದರಿಂದಾಗಿ ವೃತ್ತಿಜೀವನದ ಜೊತೆಗೆ ವೈಯಕ್ತಿಕ ಸ್ನೇಹವೂ ವೃದ್ಧಿಯಾಗುತ್ತದೆ ಎಂದು ಮೈಸೂರು ಎಕ್ಸ್ಪ್ರೆಸ್ ಖ್ಯಾತಿಯ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅವರು ತಿಳಿಸಿದರು.
ಭಾನುವಾರ ಮೈಸೂರಿನ ರೈಲ್ವೇ ಮೈದಾನದಲ್ಲಿ ಕರ್ನಾಟಕ ಯೂರಾಲಜಿ ಅಸೋಸಿಯೇಶನ್ ವತಿಯಿಂದ ನಡೆದ ಟಿ-10 ಕ್ರಿಕೆಟ್ ಟೂರ್ನಮೆಂಟ್ನಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಕ್ರಿಕೆಟ್ ಎಲ್ಲರನ್ನೂ ಒಟ್ಟುಮಾಡುವ ಆಟ. ವಿಶೇಷವಾಗಿ ವೃದ್ಯರು ಸದಾ ಒತ್ತಡದಲ್ಲಿ ಕಾಲಕಳೆಯುತ್ತಿರುತ್ತಾರೆ. ಆದ್ದರಿಂದ ಕ್ರೀಡೆಯಲ್ಲಿ ತೊಡಗಿಸಿಕೊಂಡು ಮನಸ್ಸು ಹಾಗೂ ದೇಹವನ್ನು ಹಗುರಾಗಿಸಿಕೊಳ್ಳುವುದು ಒಳ್ಳೆಯದು ಎಂದು ಹೇಳಿದರು.
ವೃತ್ತಿಜೀವನದ ಈಚೆಗೂ ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧ ಕಾಪಾಡಿಕೊಳ್ಳುವುದು ಮುಖ್ಯವಾಗುತ್ತದೆ. ಇದಕ್ಕೆ ಕ್ರೀಡೆ ಬಹಳ ಸುಲಭ ವಿಧಾನ. ಅದರಲ್ಲೂ ವಿಶೇಷವಾಗಿ ಕ್ರಿಕೆಟ್ ತಂಡದ ಆಟವಾದ ಕಾರಣ ಎಲ್ಲರನ್ನೂ ಒಟ್ಟಿಗೆ ತರುತ್ತದೆ. ಇಂತಹ ಪ್ರಯತ್ನ ಮಾಡಿರುವುದಕ್ಕೆ ಎಲ್ಲರಿಗೂ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಯೂರಾಲಜಿಸ್ಟ್ಗಳು ಮಾತ್ರವಲ್ಲದೆ ಇನ್ನಿತರ ತಜ್ಞರು ಸಹ ಈ ರೀತಿಯ ಪಂದ್ಯಾವಳಿಗಳನ್ನು ಆಯೋಜನೆ ಮಾಡಬೇಕು ಎಂದು ತಿಳಿಸಿದರು.
URO ಪ್ರೀಮಿಯರ್ ಲೀಗ್ ಮೊದಲನೇ ಆವೃತ್ತಿಯಲ್ಲಿ ವೆಸ್ಟರ್ನ್ ವಾರಿಯರ್ಸ್ ತಂಡ 15 ರನ್ ಗಳ ಜಯ ದಾಖಲಿಸಿತು. ವಾರಿಯರ್ಸ್ ತಂಡವು 10 ಓವರ್ ಗಳ ಈ ಪಂದ್ಯದಲ್ಲಿ 6 ವಿಕೆಟ್ ನಷ್ಟಕ್ಕೆ 99 ರನ್ ಗಳಿಸಿತು, ಇದಕ್ಕೆ ಉತ್ತರವಾಗಿ ಉತ್ತರ ಕರ್ನಾಟಕ ತಂಡ 84 ರನ್ ಗಳಿಸಿತು. Dr ನಂದ ಕಿಶೋರ್ ಭರ್ಜರಿ 50 ರನ್ ಗಳಿಸಿ ತಂಡಕ್ಕೆ ಆಸರೆ ಆದರು. ಅಂಕಿತ ರಾಯ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು. DR ಕಾರ್ತಿಕ್ ಸರಣಿ ಪುರುಷೋತ್ತಮ ಪ್ರಶಸ್ತಿ ಪಡೆದರು.
ಮೈಸೂರ್ ಎಕ್ಸ್ಪ್ರೆಸ್ ಖ್ಯಾತಿಯ ಜಾವಗಲ್ ಶ್ರೀನಾಥ್, ಡಾ.ಕುಮಾರ್ ಪ್ರಭು ಮತ್ತು ಪ್ರಶಾಂತ್ ಮಸ್ತಿಹೊಳಿ ಪ್ರಶಸ್ತಿ ಪ್ರದಾನ ಮಾಡಿದರು. ಡಾ.ನರೇಂದ್ರ ಜೆ ಬಿ, ಡಾ.ಸಚಿನ್ ಧರ್ವಾಡ್ಕರ್ ಹಾಗೂ ಎಲ್ಲಾ ಕೌನ್ಸಿಲ್ ಸದಸ್ಯರು ಮತ್ತು ಹಿರಿಯ ಯೂರಾಲಜಿಸ್ಟ್ ವೈದ್ಯರು ಕುಟುಂಬ ಸಮೇತರಾಗಿ ಬಂದು ಈ ಒಂದು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.