ಹವಮಾನ ಬದಲಾವಣೆಗೆ ತಕ್ಕಂತೆ ಬೆಳೆ ಬೆಳೆಯಲು ಅರಿವು ಮೂಡಿಸಿ:

20
Share

ರೈತರಿಗೆ ಹವಮಾನ ಬದಲಾವಣೆಗೆ ತಕ್ಕಂತೆ ಬೆಳೆ ಬೆಳೆಯಲು ಅರಿವು ಮೂಡಿಸಿ:ದರ್ಶನ ಪುಟ್ಟಣಯ್ಯ
ಮಂಡ್ಯ.ಜು.28-
ಹವಮಾನ ಬದಲಾವಣೆಯಿಂದ ಅತಿವೃಷ್ಠಿ ಹಾಗೂ ಅನಾವೃಷ್ಠಿಗೆ ತುತ್ತಾಗಿ ರೈತರ ಬೆಳೆ ಹಾಳಾಗುತ್ತಿದೆ. ಹಾಗಾಗಿ ಹವಮಾನ ಬದಲಾವಣೆಗೆ ತಕ್ಕಂತೆ ರೈತರು ಬೆಳೆ ಬೆಳೆಯಬೇಕು. ಇದಕ್ಕೆ ಸಂಬಂಧಪಟ್ಟ ಕೃಷಿ ಇಲಾಖೆಯ ಅಧಿಕಾರಿಗಳು ರೈತರಿಗೆ ಕಾಲಕಾಲಕ್ಕೆ ಮಾಹಿತಿ ಒದಗಿಸಬೇಕು ಎಂದು ಶಾಸಕ ದರ್ಶನ ಪುಟ್ಟಣ್ಣಯ್ಯ ಅವರು ತಿಳಿಸಿದರು.

ಅವರು ಇಂದು ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ನಡೆದ ರೈತರ ಕುಂದು ಕೊರೆತ ಸಭೆಯ ನೇತೃತ್ವವಹಿಸಿ ಮಾತನಾಡಿದರು.

ಕಬ್ಬು ಬೆಳೆಗೆ ಸೂಕ್ತ ಬೆಂಬಲ ಬೆಲೆ ನೀಡುವಂತೆ ಶಾಸನ ಸಭೆಯಲ್ಲಿ ಚರ್ಚಿಸಲಾಗುವುದು. ಬಹುವಾರ್ಷಿಕ ಬೆಳೆಗಳಾದ ತೆಂಗು, ಅಡಿಕೆ ಹಾಗೂ ರಸಗೊಬ್ಬರಗಳ ವಿತರಣೆಯಲ್ಲಿ ಎಲ್ಲೂ ಲೋಪ ಉಂಟಾಗದಂತೆ ಎಚ್ಚರವಹಿಸಲಾಗುವುದು ಎಂದರು.

ಇಂದಿನ ರೈತರ ಕುಂದು ಕೊರತೆ ಸಭೆಯಲ್ಲಿ ಚರ್ಚಿಸಲಾಗಿರುವ ಎಲ್ಲಾ ವಿಷಯವನ್ನು ಮುಂದಿನ ಶಾಸಕಾಂಗ ಸಭೆಯಲ್ಲಿ ರೈತ ಹಾಗೂ ಮಂಡ್ಯ ಜಿಲ್ಲೆ ಅಭಿವೃದ್ಧಿಗೆ ಬಗ್ಗೆ ಚರ್ಚಿಸಿಲಾಗುವುದು ಎಂದರು.

ಸಾಮಾಜಿಕ ಪಿಂಚಣಿ ಅಥವಾ  ಸಹಾಯಧನದಲ್ಲಿ ರೈತರ ಸಾಲ ಕಟಾವು ಮಾಡುವಂತಿಲ್ಲ

ರೈತರ ಖಾತೆಗೆ ವಿವಿಧ ಯೋಜನೆಯಡಿ ಜಮೆಯಾಗುವ ಸಹಾಯಧನ ಹಾಗೂ ಸಾಮಾಜಿಕ ಪಿಂಚಣಿ ಹಣದಲ್ಲಿ ರೈತರ ಸಾಲದ ಹಣವನ್ನು ಬ್ಯಾಂಕ್ ನವರು ಕಟಾವು ಮಾಡಬಾರದು ಎಂದು ಜಿಲ್ಲಾಧಿಕಾರಿ ಡಾ: ಕುಮಾರ ಅವರು ತಿಳಿಸಿದರು.

ಸಭೆಯಲ್ಲಿದ್ದ ರೈತರು ತಮ್ಮ ಮಕ್ಕಳ ವಿದ್ಯಭ್ಯಾಸದ ಸಾಲಕ್ಕೆ ಸಂಬಂಧಿಸಿದಂತೆ ಸಿವಿಲ್ ಸ್ಕೋರ್ ಗಳನ್ನು ಲೆಕ್ಕ ಮಾಡುವಾಗ ಬೆಳೆ ಸಾಲದ ಸಾಲವನ್ನು ಲೆಕ್ಕಚಾರ ಮಾಡುತ್ತಾರೆ. ಸಾಲ ದೊರಕುವುದು ಕಷ್ಟಕರವಾಗುತ್ತಿದೆ ಎಂದಾಗ ಈ ಕುರಿತು ಡಿ.ಎಲ್.ಬಿ.ಸಿ ಸಭೆಯಲ್ಲಿ ಚರ್ಚಿಸಿ ಪ್ರಸ್ತಾವನೆಯನ್ನು ರಾಜ್ಯಮಟ್ಟಕ್ಕೆ ಕಳುಹಿಸಿಕೊಡಲಾಗುವುದು ಎಂದರು

ರೈತರ ಮಾರುಕಟ್ಟೆಯನ್ನು ದಲ್ಲಾಳಿ ಮುಕ್ತ ಮಾರುಕಟ್ಟೆ ಮಾಡಿ ರೈತರಿಂದ ಸರ್ಕಾರವೇ ಖರೀದಿ ಮಾಡುವಂತೆ ರೈತ ಮುಖಂಡರು ಚರ್ಚಿಸಿದಾಗ ಪ್ರಸ್ತಾವನೆಯನ್ನು ಸರ್ಕಾರಕ್ಕೆ  ಕಳುಹಿಸಲಾಗುವುದು ಎಂದರು.

ಮೈಶುಗರ್ ಸಕ್ಕರೆ ಕಾರ್ಖಾನೆಯಲ್ಲಿ ತಾಂತ್ರಿಕಾ ಸಿಬ್ಬಂದಿಗಳ ಕೊರತೆ ಇಲ್ಲ. ಮೆಕಾನಿಕಲ್ ಇಂಜಿನಿಯರ್, ಚೀಫ್ ಕೆಮಿಸ್ಟ್ರಿ ಪರ್ಸನ್ ಕಾರ್ಯನಿರ್ವಹಿಸುತ್ತಿದ್ದಾರೆ. ಇವರೊಂದಿಗೆ ಆರ್.ಬಿ.ಟೆಕ್ ಸಂಸ್ಥೆಯವರು ತಾಂತ್ರಿಕ ಸಿಬ್ಬಂದಿಗಳನ್ನು ನಿಯೋಜಿಸಿದ್ದಾರೆ. ಸಕ್ಕರೆ ಕಾರ್ಖಾನೆಗೆ ಟರ್ಬೈನ್ ಜುಲೈ 26 ರಂದು ಸರಬರಾಜು ಆಗಬೇಕಿದ್ದು, ಅವರಿಗೆ ಅಂತಿಮ ಗಡುವು ನೀಡಲಾಗಿದ್ದು, ಜುಲೈ 31 ರಂದು ಸರಬರಾಜು ಆಗಲಿದೆ. ಸಕ್ಕರೆ ಕಾರ್ಖಾನೆಗಳು ರೈತರಿಂದ ಖರೀದಿಸುವ ಕಬ್ಬಿಗೆ ನಿಗದಿತ ಅವದಿಯಲ್ಲಿ ಹಣ ನೀಡಿ. ಕಬ್ಬಿಗೆ ಹೊಸ ದರ ನಿಗದಿಯಾದಲ್ಲಿ ವ್ಯತ್ಯಾಸವನ್ನು ನಂತರ ಪಾವತಿಸಬಹುದು ಎಂದರು.

ರೈತರು ಬೆಳೆದ ಬೆಳೆ  ಕಾಡು ಪ್ರಾಣಿಗಳಿಂದ ಹಾನಿಯಾಗಿರುವುದು ವರದಿಯಾಗುತ್ತಿದೆ . ಇದಕ್ಕೆ ಸೂಕ್ತ ಪರಿಹಾರ ನೀಡುವಂತೆ ಹಾಗೂ ಕಾಡು ಪ್ರಾಣಿಗಳು ರೈತರು ಬೆಳೆದ ಬೆಳೆಗೆ ಲಗ್ಗೆ ಹಾಕದಂತೆ ಎಚ್ಚರ ವಹಿಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಗುವುದು ಎಂದರು.

ತಾಲ್ಲೂಕು ಕಚೇರಿಗಳಲ್ಲಿ ಕೆಲಸ ಮಾಡಿಕೊಡಲು ವಿಳಂಬವಾಗುತ್ತಿದೆ ಎಂದು ಸಾರ್ವಜನಿಕರಿಂದ ಸಾಕಷ್ಟು ದೂರು ಕೇಳಿಬಂದಿದ್ದು, ವಿಶೇಷವಾಗಿ ಹೋಬಳಿ ಮಟ್ಟದಲ್ಲಿ ಬೃಹತ್ ಪೌತಿಖಾತೆ ಆಂದೋಲನವನ್ನು ಆಯೋಜಿಸಲು ಯೋಜಿಸಲಾಗುವುದು. ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ಅಧಿಕಾರಿ, ಪಿ.ಡಿ.ಒ ಗಳು ಕಡ್ಡಾಯವಾಗಿ ಗ್ರಾಮದಲ್ಲೇ ಇದ್ದು, ಸಾರ್ವಜನಿಕರನ್ನು ಅಲೆದಾಡಿಸದೇ ಅವರ ಸಮಸ್ಯೆ ಪರಿಹರಿಸಬೇಕು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಹೆಚ್ ಎಲ್ ನಾಗರಾಜು, ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್, ಅಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಎಂ.ಪಿ ಕೃಷ್ಣಕುಮಾರ್ ಹಾಗೂ ವಿವಿಧ ಸಂಘಟನೆಯ ರೈತ ಮುಖಂಡರು ಹಾಜರಿದ್ದರು.


Share