ದಾವಣಗೆರೆ ಖಾಸಗಿ ಆಸ್ಪತ್ರೆಗಳು ಸೀಸ್

595
Share

ದಾವಣಗೆರೆ ವಾರ್ತಾಇಲಾಖೆ

ಸರ್ಕಾರದ ವೆಬ್‍ಪೋರ್ಟಲ್‍ನಲ್ಲಿ ಐಎಲ್‍ಐ, ಎಸ್‍ಎಆರ್‍ಐ ಪ್ರಕರಣ ಅಪ್‍ಡೇಟ್ ಮಾಡದಿರುವ ಆಸ್ಪತ್ರೆ/ನರ್ಸಿಂಗ್‍ಹೋಂಗಳ ತಾತ್ಕಾಲಿಕ ಸೀಜ್

ದಾವಣಗೆರೆ ಜು.02 (ಕರ್ನಾಟಕ ವಾರ್ತೆ)-
ಸರ್ಕಾರದ ಆದೇಶದಂತೆ ಆಸ್ಪತ್ರೆಗಳಿಗೆ ಬರುವವರಲ್ಲಿ ಶೀತ, ಜ್ವರದಂತಹ (ಐಎಲ್‍ಐ) ಮತ್ತು ತೀವ್ರ ಉಸಿರಾಟದ ತೊಂದರೆ(ಎಸ್‍ಎಆರ್‍ಐ) ಪ್ರಕರಣಗಳನ್ನು ಪ್ರತಿದಿನ ಆರೋಗ್ಯ ಇಲಾಖೆಯ ವೆಬ್‍ಪೋರ್ಟಲ್‍ಗೆ ಅಪ್‍ಡೇಟ್ ಮಾಡದೇ ಇರುವ ನಗರದ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ಇಂದು ಡಿಹೆಚ್‍ಓ ತಂಡ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಅಂತಹ ಆಸ್ಪತ್ರೆ/ನರ್ಸಿಂಗ್ ಹೋಂಗಳನ್ನು ತಾತ್ಕಾಲಿಕವಾಗಿ ಸೀಜ್ ಮಾಡಲಾಯಿತು.
ಮೊದಲಿಗೆ ಪಿಜೆ ಬಡಾವಣೆಯಿಂದ ಆರಂಭಿಸಿ ಕೆ.ಬಿ.ಬಡಾವಣೆ, ಬೇತೂರು ರಸ್ತೆ ಗಳಲ್ಲಿನ ಒಟ್ಟು 11 ಆಸ್ಪತ್ರೆಗಳಿಗೆ ಡಿಹೆಚ್‍ಓ ಡಾ.ರಾಘವೇಂದ್ರಸ್ವಾಮಿ ಮತ್ತು ತಂಡ ಭೇಟಿ ನೀಡಿ ಐಎಲ್‍ಐ ಮತ್ತು ಎಸ್‍ಎಆರ್‍ಐ ಪ್ರಕರಣಗಳಲ್ಲಿ ಪ್ರತಿದಿನ ಏಕೆ ವೆಬ್‍ಪೋರ್ಟಲ್‍ನಲ್ಲಿ ಹಾಕುತ್ತಿಲ್ಲವೆಂದು ವಿಚಾರಿಸಿ, ಹೀಗೆ ಅಪ್‍ಡೇಟ್ ಮಾಡದೇ ಇರುವ ಈ ಆಸ್ಪತ್ರೆಗಳನ್ನು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತಾತ್ಕಾಲಿಕವಾಗಿ ಸೀಜ್ ಮಾಡಿದರು.
ಈ ವೇಳೆ ಡಿಹೆಚ್‍ಓ ಡಾ.ರಾಘವೇಂದ್ರ ಸ್ವಾಮಿ ಮಾತನಾಡಿ, ಸರ್ಕಾರದ ಆದೇಶದ ಮೇರೆಗೆ ಕೊರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ಕಳೆದ 2 ತಿಂಗಳಿಂದ ಆರೋಗ್ಯ ನಿರ್ದೇಶನಾಲಯದ ಆಯುಕ್ತರು, ಕಾರ್ಯದರ್ಶಿಗಳು ಆದೇಶ ಹೊರಡಿಸಿ, ಕೆಪಿಎಂಇ ಕಾಯ್ದೆ ಅಡಿ ನೋಂದಣಿಯಾದ ಪ್ರತಿ ಖಾಸಗಿ ಆಸ್ಪತ್ರೆಗಳಿಗೆ ಯೂಸರ್ ಐಡಿ, ಪಾಸ್‍ವರ್ಡ್ ನೀಡಿ ಆನ್‍ಲೈನ್ ಮೂಲಕ ತಮ್ಮ ಆಸ್ಪತ್ರೆಗಳಿಗೆ ಬರುವ ಐಎಲ್‍ಐ ಮತ್ತು ಎಸ್‍ಎಆರ್‍ಐ ಪ್ರಕರಣಗಳನ್ನು ಅಪ್‍ಡೇಟ್ ಮಾಡಬೇಕೆಂದು ತಿಳಿಸಲಾಗಿತ್ತು. ಹೀಗೆ ಅಪ್‍ಡೇಟ್ ಮಾಡಿದ ವರದಿಯು ಸ್ಟೇಟ್ ಪೋರ್ಟಲ್‍ನಿಂದ ತಳಮಟ್ಟದವರೆಗೆ ಅಂದರೆ ಪ್ರಾಥಮಿಕ ಆರೋಗ್ಯ ಕೇಂದ್ರದವರೆಗೆ ತಲುಪಿಸಿ ಅವರ ವ್ಯಾಪ್ತಿಯಲ್ಲಿ ಬರುವವರಿಗೆ ಗಂಟಲು ದ್ರವ ಪರೀಕ್ಷೆಗೆ ಸಹಕಾರಿಯಾಗುವುದು ಈ ಯೋಜನೆಯ ಉದ್ದೇಶವಾಗಿದೆ.
ಜಿಲ್ಲಾಧಿಕಾರಿಗಳು ಈ ಬಗ್ಗೆ ಐಎಂಎ, ಖಾಸಗಿ ಆಸ್ಪತ್ರೆಯವರೊಂದಿಗೆ ಸಭೆ ನಡೆಸಿ ಪ್ರತಿದಿನ ಮಾಹಿತಿ ಅಪ್‍ಡೇಟ್ ಮಾಡುವಂತೆ ತಿಳಿಸಿದ್ದರು. ಜೊತೆಗೆ ಅಪ್‍ಡೇಟ್ ಮಾಡಿದವರಿಗೆ ನೋಟಿಸನ್ನೂ ಸಹ ನೀಡಲಾಗಿದ್ದರೂ ಕೆಲವರು ಅಪ್‍ಡೇಟ್ ಮಾಡುತ್ತಿಲ್ಲ. ಆದ ಕಾರಣ ಜಿಲ್ಲಾಧಿಕಾರಿಗಳು ಹೀಗೆ ನಿರ್ಲಕ್ಷ್ಯ ವಹಿಸಿದವರ ಆಸ್ಪತ್ರೆ/ನರ್ಸಿಂಗ್ ಹೋಂಗಳನ್ನು ತಾತ್ಕಾಲಿಕವಾಗಿ ಸೀಜ್ ಮಾಡುವಂತೆ ಜೂ.30 ರಂದು ಆದೇಶಿಸಿದ ಹಿನ್ನೆಲೆಯಲ್ಲಿ ಇಂದು ದಾಳಿ ನಡೆಸಲಾಗಿದೆ.
ಜಿಲ್ಲೆಯಲ್ಲಿ ಐಎಲ್‍ಐ ಮತ್ತು ಎಸ್‍ಎಆರ್‍ಐ ಪ್ರಕರಣ ಅಪ್‍ಡೇಟ್ ಮಾಡದ 170 ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಕೆಪಿಎಂಇ ಅಡಿಯಲ್ಲಿ ನವೀಕರಿಸದ ಮತ್ತು ಐಎಲ್‍ಐ ಎಸ್‍ಎಆರ್‍ಐ ಪ್ರಕರಣ ವೆಬ್‍ಪೋರ್ಟಲ್‍ಲ್ಲಿ ದಾಖಲಿಸದೇ ಇರುವ ಒಟ್ಟು 280 ಆಸ್ಪತ್ರೆ/ನರ್ಸಿಂಗ್ ಹೋಂಗಳಿಗೆ ನೋಟಿಸ್ ನೀಡಲಾಗಿದೆ. ಕೆಲವು ಆಸ್ಪತ್ರೆ/ನರ್ಸಿಂಗ್ ಹೋಂಗಳಿಗೆ ನವೀಕರಿಸುವಲ್ಲಿ ಕೆಲವು ಸಮಸ್ಯೆಗಳಿವೆ. ಇವುಗಳಿಗೆ ಪರಿಹಾರೋಪಾಯಗಳ ಬಗ್ಗೆ ಜು.3 ರಂದು ಡಿಹೆಚ್‍ಓ ಕಚೇರಿಯಲ್ಲಿ ಖಾಸಗಿ ಆಸ್ಪತ್ರೆಯವರಿಗೆ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಎಲ್ಲರೂ ಹಾಜರಾಗಿ ಇದರ ಸದುಪಯೋಗ ಪಡೆಯಬೇಕು. ಹಾಗೂ ಇನ್ನು 15 ದಿನಗಳ ಒಳಗೆ ನೋಂದಣಿ ನವೀಕರಿಸಿಕೊಂಡು ಸರ್ಕಾರದ ಆದೇಶದಂತೆ ನಡೆಯಬೇಕೆಂಬುದು ನಮ್ಮ ಆಶಯವಾಗಿದೆ ಎಂದರು.
ತಂಡದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಕಾರಾಧ್ಯ, ಬಿಇಹೆಚ್‍ಓ ಡಾ.ಸುರೇಶ್, ಇತರೆ ಸಿಬ್ಬಂದಿಗಳು ಹಾಜರಿದ್ದರು.
(ಫೋಟೊ ಇದೆ)



Share