ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 20
ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .
ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )
ಇಂದಿನ ನಾಮಾವಳಿಗಳು :
101 . ಓಂ ಸರ್ವನೇತ್ರಾಧಿವಾಸಾಯ ನಮಃ
102 . ಓಂ ವೀರಾಸನಾಶ್ರಯಾಯ ನಮಃ
103 . ಓಂ ಪೀತಾಂಬರಾಯ ನಮಃ
104 . ಓಂ ಖಂಡರದಾಯ ನಮಃ
105 . ಓಂ ಖಂಡೇಂದುಕೃತಶೇಖರಾಯ ನಮಃ
101 . ಓಂ ಸರ್ವನೇತ್ರಾಧಿವಾಸಃ : –
ಭಾಷ್ಯ :
ಸರ್ವನೇತ್ರೇಷು ವಸತಿ ಯ ಏಷೋ ೭ ಕ್ಷಿಣಿ ಪೂರುಷಃ |
ಏಷ ಆತ್ಮೀತಿ ವಚನಾತ್ ಸರ್ವ ನೇತ್ರಾಧಿವಾಸಕ ॥
ಎಲ್ಲರ ಕಣ್ಣುಗಳಲ್ಲಿ ವಾಸ ಮಾಡುವುದರಿಂದಲೂ ‘ ಯ ಏಷೋ ೭ ಕ್ಷಿಣಿ ‘ ( ಛಾ .೪.೩೪.೩ ) ಎಂಬ ವೇದವಚನವನ್ನು ಅನುಸರಿಸಿ ಎಲ್ಲರ ಕಣ್ಣುರೆಪ್ಪೆಗಳಲ್ಲಿರುವ ಪುರುಷನು ಇವನೇ ಎಂದು ತಿಳಿದುಬರುವುದರಿಂದಲೂ ಗಣೇಶನು ಸರ್ವನೇತ್ರಾಧಿವಾಸನು .
( ಬ್ರಹ್ಮಚರ್ಯಾದಿ ಸಾಧನ ಸಂಪನ್ನರು , ಶಾಂತರು , ವಿವೇಕಿಗಳು ಆದವರ ದೃಷ್ಟಿಯ ದ್ರಷ್ಟಾರನು ಪರಮಪುರುಷನಾದ ಪರಮಾತ್ಮನೆಂದು ಛಾಂದೋಗ್ಯವು ತಿಳಿಸುತ್ತಿದೆ . )
ಓಂ ಸರ್ವನೇತ್ರಾಧಿವಾಸಾಯ ನಮಃ
102 . ಓಂ ವೀರಾಸನಾಶ್ರಯಾಯ ನಮಃ : –
ಭಾಷ್ಯ : ವಾಮಜಾನೂಪರಿಗತದಕ್ಷಪಾದೋಪವೇಶನಂ |
ವೀರಾಸನಂ ತಥಾ ಸ್ಥಾನಾದೇಷ ವೀರಾಸನಾಶ್ರಯಃ ||
ಎಡಮಂಡಿಯ ಮೇಲೆ ಬಲಗಾಲನ್ನು ಇರಿಸಿಕೊಂಡು ಕುಳಿತುಕೊಳ್ಳುವುದನ್ನು ವೀರಾಸನವೆನ್ನುತ್ತಾರೆ . ವೀರಾಸನದಲ್ಲಿ ಆಸೀನನಾಗಿರುವುದರಿಂದ ಗಣೇಶನು ವೀರಾಸನಾಶ್ರಯನು .
ಓಂ ವೀರಾಸನಾಶ್ರಯಾಯ ನಮಃ
103 . ಓಂ ಪೀತಾಂಬರಃ : –
ಭಾಷ್ಯ :
ನಿಪೀತಂ ಗಗನಂ ಯೇನ ಯಸ್ಯ ಪೀತೋ ೭ ಥವಾ ಪಟಃ |
ಸತು ಪೀತಾಂಬರಃ ….. ……. ॥
ಯಾರಿಂದ ಆಕಾಶವು ರಕ್ಷಿಸಲ್ಪಟ್ಟಿದೆಯೋ ಅಥವಾ ನುಂಗಲ್ಪಟ್ಟಿದೆಯೋ ಅವನು ಪೀತಾಂಬರನು. ಯಾರ ವಸ್ತ್ರಗಳು ಹಳದಿ ಬಣ್ಣದಲ್ಲಿವೆಯೋ ಅವನು ಪೀತಾಂಬರನು.
ಓಂ ಪೀತಾಂಬರಾಯ ನಮಃ
104 . ಓಂ ಖಂಡರದಃ : –
ಭಾಷ್ಯ :
….. ಖಂಡರದೋ ದನ್ತಾರ್ಧಧಾರಣಾತ್ ।
ಮುರಿದಿರುವ ದಂತವನ್ನು ಕೈಯಲ್ಲಿ ಹಿಡಿದಿರುವುದರಿಂದ ಗಣೇಶನು ಖಂಡರದನು .
ಓಂ ಖಂಡರದಾಯ ನಮಃ
105 . ಓಂ ಖಂಡೇಂದುಕೃತ ಶೇಖರಃ : –
ಭಾಷ್ಯ :
ಅರ್ಧಚಂದ್ರಂ ದಧನ್ ಮೂರ್ಧ್ನಾ ಖಂಡೇಂದುಕೃತಶೇಖರಃ |
ತನ್ನ ತಲೆಯ ಮೇಲೆ ಅರ್ಧಚಂದ್ರನನ್ನು ಅಲಂಕಾರವಾಗಿ ಧರಿಸಿರುವುದರಿಂದ ಖಂಡೇಂದುಕೃತಶೇಖರನು .
ಓಂ ಖಂಡೇಂದುಕೃತಶೇಖರಾಯ ನಮಃ
ಚಿತ್ರಾಂಕಶ್ಯಾಮದಶನೋ ಫಾಲಚಂದ್ರಶ್ಚತುರ್ಭುಜಃ |
ಯೋಗಾಧಿಪಸ್ತಾರಕಸ್ಥಃ ಪೂರುಷೋ ಗಜಕರ್ಣಕಃ ll
( ಮುಂದುವರೆಯುವುದು )
( ಸಂಗ್ರಹ )
* ಭಾಲರಾ
ಬೆಂಗಳೂರು