ಮುಂಗಾರು ಬೆಳೆ ಸಮೀಕ್ಷೆ -2020 ಪ್ರಚಾರ ಸಾಮಗ್ರಿ ಬಿಡುಗಡೆ ಮಾಡಿ, ಪ್ರಚಾರ ವಾಹನಕ್ಕೆ ಸಚಿವರಿಂದ ಚಾಲನೆ.
ಧಾರವಾಡ (ಕರ್ನಾಟಕ ವಾರ್ತೆ)ಅಗಸ್ಟ್,13: 2020-21 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯ ಆಗಸ್ಟ್ 11 ರಿಂದ ಆರಂಭವಾಗಿದ್ದು, ಬೆಳೆ ಸಮೀಕ್ಷೆ ಕಾರ್ಯದಲ್ಲಿ ರೈತರು ಸ್ವತಃ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರವನ್ನು ಸ್ವತ: ದಾಖಲಿಸಲು ಸರಕಾರ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್, ಬಿಡುಗಡೆ ಮಾಡಿದೆ.
ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ ಅವರು ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಬಳಕೆ ಮತ್ತು ಸಮೀಕ್ಷೆ ವಿವರಗಳನ್ನು ದಾಖಲಿಸುವ ಕುರಿತು ಮಾಹಿತಿಯುಳ್ಳ ಕರಪತ್ರ, ಪೋಸ್ಟರ್ ಪ್ರಚಾರ ಸಾಮಗ್ರಿಗಳನ್ನು ಇಂದು ಜಿಲ್ಲಾಧಿಕಾರಿಗಳು ಕಚೇರಿ ಸಭಾಂಗಣದಲ್ಲಿ ಬಿಡುಗಡೆ ಮಾಡಿದರು.
ನಂತರ ಅವರು ಬೆಳೆ ಸಮೀಕ್ಷೆ ಮೂಬೈಲ್ ಆ್ಯಪ್ ಕುರಿತು ಗ್ರಾಮೀಣ ಭಾಗದಲ್ಲಿ ಸಂಚರಿಸಿ, ಮಾಹಿತಿ ನೀಡುವ ಪ್ರಚಾರ ವಾಹನಗಳಿಗೆ ಹಸಿರು ಬಾವುಟ ತೋರಿಸಿ, ಚಾಲನೆ ನೀಡಿದರು. ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿ.ಪಂ ಸಿಇಓ ಡಾ.ಬಿ.ಸಿ ಸತೀಶ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ್ ಐ.ಬಿ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.