ಸಿಕಲ್ ಖಾಯಿಲೆಯ ನಿರ್ಮೂಲನಾ ಅಭಿಯಾನ
ಮೈಸೂರು,ಜೂ.26.- ಸಿಕಲ್ ಸೆಲ್ ರಕ್ತಹೀನತೆ ಖಾಯಿಲೆಯೂ ವಂಶಾವಳಿ ಖಾಯಿಲೆಯಾಗಿದ್ದು ಕೆಂಪು ರಕ್ತ ಕಣಗಳ ಅಸ್ವಸ್ಥತೆ ಖಾಯಿಲೆಯಾಗಿರುತ್ತದೆ. ಈ ಖಾಯಿಲೆ ಇರುವವರಲ್ಲಿ ಕೆಂಪು ರಕ್ತ ಕಣಗಳು ಕುಡುಗೋಲು ಆಕಾರದಲ್ಲಿದ್ದು, ದೇಹದಲ್ಲಿ ರಕ್ತದ ಸರಾಗ ಸಂಚಾರದಲ್ಲಿ ತೊಡಕುಗಳು ಉಂಟಾಗಿ ಇದರಿಂದ ವಿವಿಧ ಆರೋಗ್ಯ ಸಮಸ್ಯೆಗಳು ವಿಶೇಷವಾಗಿ ಕಾರಣ ಇಲ್ಲದ ನೋವು ಪದೇಪದೇ ವಿವಿಧ ಸೋಂಕುಗಳು ಹಾಗೂ ಪಾಶ್ವ ವಾಯುವಿಗೆ ಸಹ ಕಾರಣವಾಗಬಹುದು.
ಕರ್ನಾಟಕ ರಾಜ್ಯದಲ್ಲಿ ಈ ಖಾಯಿಲೆಯ ಮೈಸೂರು, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆ ಅಡಿಯಲ್ಲಿ ತಪಾಸಣಾ ನಡೆಸಲಾಗಿದೆ. ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ತಾಂತ್ರಿಕ ಸಮಿತಿಯು ಈ ಖಾಯಿಲೆಯನ್ನು ಸಾರ್ವಜನಿಕ ಆರೋಗ್ಯ ಸಮಸ್ಯೆ ಎಂದು ಪರಿಗಣಿಸಿದ್ದು, ವಿಶೇಷ ಒತ್ತು ನೀಡಿ ತಪಾಸಣೆ ನಿರ್ವಹಣೆ ತಡೆಗಟ್ಟುವಿಕೆ ಹಾಗೂ ಆರೋಗ್ಯ ಶಿಕ್ಷಣ ಚಟುವಟಿಕೆಗಳಿಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಸೇರ್ಪಡೆಗೊಳಿಸಲಾಗಿದೆ.
ಅಭಿಯಾನದ ಉದ್ದೇಶ:
ಪ್ರಸ್ತುತ ಇರುವ ಸಿಕಲ್ ಸೇಲ್ ರಕ್ತಹೀನತೆಯ ರೋಗಿಗಳಿಗೆ ವಿಶೇಷ ಆರೈಕೆ, ಮುಂದುವರಿದ ಚಿಕಿತ್ಸಾ ಕ್ರಮಗಳು ಮತ್ತು ಆರೋಗ್ಯ ಶಿಕ್ಷಣ ಚಟುವಟಿಕೆಗಳಿಗೆ ಸಂಬOಧಿಸಿದ ಉದ್ದೇಶವನ್ನು ಹೊಂದಿದ್ದು 2047 ರೊಳಗೆ ಸಿಕಲ್ ಸೆಲ್ ರಕ್ತ ಹೀನತೆಯನ್ನು ನಿರ್ಮೂಲನೆ ಗೊಳಿಸುವ ಗುರಿಯನ್ನು ಹೊಂದಲಾಗಿದೆ.
ಈ ಖಾಯಿಲೆಯ ತಪಾಸಣಾ ಕಾರ್ಯಕ್ಕೆ ಕರ್ನಾಟಕದ ಚಾಮರಾಜನಗರ, ಮೈಸೂರು, ಕೊಡಗು, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಆಯ್ಕೆಯಾಗಿದ್ದು ಈ ಜಿಲ್ಲೆಗಳಲ್ಲಿರುವ ಜೇನು ಕುರುಬ, ಬೆಟ್ಟ ಕುರುಬ, ಬೇಡ, ಎರವ, ಈಡಿಗ ಸಮುದಾಯದಲ್ಲಿ ಈ ಖಾಯಿಲೆ ಕಂಡುಬOದಿದ್ದು ಮುಂದಿನ ಎರಡು ವರ್ಷಗಳಲ್ಲಿ ತಪಾಸಣೆಯನ್ನು ನಡೆಸಲಾಗುತ್ತದೆ.
ಈ ರಾಷ್ಟ್ರೀಯ ಕಾರ್ಯಕ್ರಮವನ್ನು ಜೂ.27 ರಂದು ಮಧ್ಯ ಪ್ರದೇಶದ ಶಹ್ದೋಲ್ ನಲ್ಲಿ ಪ್ರಧಾನ ಮಂತ್ರಿಗಳು ಉದ್ಘಾಟಿಸಲಿದ್ದು ಕರ್ನಾಟಕದಲ್ಲಿ ಈ ಕಾರ್ಯಕ್ರಮವನ್ನು ಮೈಸೂರು ಜಿಲ್ಲೆಯ ಎಚ್ ಡಿ ಕೋಟೆ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಸಿ ಮಹದೇವಪ್ಪ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಅವರು ಹೆಚ್.ಡಿ. ಕೋಟೆ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಜೂ.27 ರ ಸಂಜೆ 4 ಗಂಟೆಗೆ ಉದ್ಘಾಟಿಸಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.