ಕ್ಯಾಂಪಸ್‌ ಕ್ರಾಂತಿ ಕಾಲೇಜ್ ಹುಡುಗರ ಹೊಸ ಕ್ರಾಂತಿ

110
Share

ಕ್ಯಾಂಪಸ್‌ ಕ್ರಾಂತಿ
ಕಾಲೇಜ್ ಹುಡುಗರ ಹೊಸ ಕ್ರಾಂತಿ

ಈಹಿಂದೆ ಸ್ಟೂಡೆಂಟ್ಸ್ ಹಾಗೂ ಬಿಂದಾಸ್‌ ಗೂಗ್ಲಿ ಚಿತ್ರಗಳನ್ನು ನಿರ್ದೇಶಿಸಿದ್ದ ಸಂತೋಷ್‌ಕುಮಾರ್ ಸಾರಥ್ಯದ ಮತ್ತೊಂದು ಚಿತ್ರ ಕ್ಯಾಂಪಸ್ ಕ್ರಾಂತಿ. ಇದೇ ತಿಂಗಳ ೨೪ರಂದು ತೆರೆಕಾಣುತ್ತಿರುವ ಈ ಚಿತ್ರದ ಟ್ರೈಲರ್ ಹಾಗೂ ಹಾಡುಗಳು ಸಿನಿ ಪ್ರಿಯರನ್ನು ಸೆಳೆದಿವೆ. ಕಾಲೇಜ್ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳ ಸುತ್ತ ನಡೆಯುವ ಕಥೆಯಿದಾಗಿದ್ದು, ಯುವನಟ ಆರ್ಯ ಹಾಗೂ ಆರತಿ ಮತ್ತು ಅಲಂಕಾರ್ ಹಾಗೂ ಇಶಾನಾ ನಾಯಕ, ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.
ನಾಯಕರ ತಂದೆಯಾಗಿ ಕೀರ್ತಿರಾಜ್ ಹಾಗೂ ತಾಯಿಯಾಗಿ ನಟಿ ವಾಣಿಶ್ರೀ ಅಭಿನಯಿಸಿದ್ದಾರೆ.
ನಿರ್ದೇಶಕ ಸಂತೋಷ್‌ಕುಮಾರ್ ಮಾತನಾಡುತ್ತ ಕಾಲೇಜ್ ಹುಡುಗರೆಲ್ಲ ಸೇರಿ ಮಾಡುವ ಹೊಸ ಕ್ರಾಂತಿ ಇದಾಗಿದ್ದು, ಕರ್ನಾಟಕ, ಮಹಾರಾಷ್ಟ್ರ ಗಡಿಯ ಅಗ್ನಿರಾಂಪುರ ಎಂಬ ಕಾಲ್ಪನಿಕ ಊರೊಂದರಲ್ಲಿ ಈ ಚಿತ್ರದ ಕಥೆ. ನಡೆಯುತ್ತದೆ. ಗಡಿ ಭಾಗದಲ್ಲಿ ಲೋಕಲ್ ರೌಡಿಸಂ ಕ್ರೈಂ ಹೇಗಿರುತ್ತೆ, ಅದು ಅಲ್ಲಿನ ಹುಡುಗರ ಮೇಲೆ ಯಾವರೀತಿ ಪರಿಣಾಮ ಬೀರುತ್ತದೆ, ಇದನ್ನೆಲ್ಲ ಆ ಹುಡುಗರು ಹೇಗೆ ತಡೆಯುತ್ತಾರೆ ಎಂದು ಹೇಳಿದ್ದೇವೆ. ಅಲ್ಲದೆ ಸುಮಾರು ೨೧ ವರ್ಷಗಳಿಂದಲೂ ಒಂದು ಊರಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ನಿಂತು ಹೋಗಿರುತ್ತೆ, ಈ ಹುಡುಗರೆಲ್ಲ ಸೇರಿ ಅಲ್ಲಿ ಮತ್ತೆ ರಾಜ್ಯೋತ್ಸವ ಆಚರಿಸುತ್ತಾರೆ. ಕನ್ನಡ ಬಾವುಟ ಹಾರಿಸುತ್ತಾರೆ‌. ಎಂಟರ್ಟೈನ್ಮೆಂಟ್ ಜೊತೆಗೆ ಕನ್ನಡ ಭಾಷೆ, ಸಂಸ್ಕ್ರತಿ, ಕನ್ನಡತನವನ್ನು ಬೆಳೆಸಬೇಕು, ವಿದ್ಯಾರ್ಥಿಗಳು ಜವಾಬ್ದಾರಿ ತೆಗೆದುಕೊಂಡರೆ ಏನು ಬೇಕಾದರೂ ಮಾಡಬಹುದು ಅಲ್ಲದೆ ಗಡಿಸಮಸ್ಯೆ ವಿದ್ಯಾರ್ಥಿಗಳ ಮೇಲೆ ಯಾವರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಈ ಚಿತ್ರದ ಮೂಲಕ ಹೇಳಿದ್ದೇನೆ. ಜೊತೆಗೆ ಲವ್ ಟ್ರ್ಯಾಕ್ ಕೂಡ ಸಾಗುತ್ತದೆ‌. ಚಿತ್ರದಲ್ಲಿ ಕಾಮಿಡಿ, ಥ್ರಿಲ್ಲರ್, ಆಕ್ಷನ್ ಎಲ್ಲವನ್ನೂ ಕಲರ್ ಫುಲ್ ಆಗಿ ತೋರಿಸಿದ್ದೇವೆ ಎಂದು ಹೇಳಿದರು. ನಟ ಆರ್ಯ‌ ಮಾತನಾಡಿ ನಾನು ಮೈಸೂರಿನವನು, ಪಿಹೆಚ್ ಡಿ ಮಾಡುತ್ತಲೇ ಬರವಣಿಗೆ ಆರಂಭಿಸಿದೆ. ಸ್ಕ್ರಿಪ್ಟ್ ಹಂತದಿಂದಲೂ ನಾನು ಜೊತೆಗಿದ್ದೇನೆ ಎಂದು ಹೇಳಿದರು.
ನಟಿ ಆರತಿ ಕನಸು ಎಂಬ ಕಾಲೇಜು ಸ್ಟೂಡೆಂಟ್ ಆಗಿ ನಟಿಸಿದ್ದಾರೆ. ಇಶಾನಾ ಪಾತ್ರದ ಹೆಸರು ಲಕ್ಷ್ಮಿ. ನಾಯಕ ಅಲಂಕಾರ್ ಒಬ್ಬ ಶ್ರೀಮಂತ ಮನೆತನದ ಯುವಕ ಆದಿಯಾಗಿ ನಟಿಸಿದ್ದಾರೆ. ನಂದಗೋಪಾಲ್ ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ವಿ.ಮನೋಹರ್ ಅವರು ಈ ಚಿತ್ರದ ಹಾಡುಗಳಿಗೆ ಸಾಹಿತ್ಯ ಬರೆದು ಸಂಗೀತ ನಿರ್ದೇಶನ ಮಾಡಿದ್ದಾರೆ. ಪಿಕೆಹೆಚ್ ದಾಸ್ ಅವರ ಕ್ಯಾಮೆರಾವರ್ಕ್ ಈ ಚಿತ್ರಕ್ಕಿದೆ. ಇನ್ನು ಚಿತ್ರದಲ್ಲಿ ೫ ಸಾಹಸ ದೃಷ್ಯಗಳಿದ್ದು, ಕುಂಗ್ ಫು ಚಂದ್ರು ಸಾಹಸ ಸಂಯೋಜನೆ ಮಾಡಿದ್ದಾರೆ. ಫ್ಯಾಷನ್ ಮೂವೀಮೇರ‍್ಸ್ ಮೂಲಕ ನಿರ್ದೇಶಕ ಸಂತೋಷ್‌ಕುಮಾರ್ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ, ಹನುಮಂತೇಗೌಡ್ರು, ಭವಾನಿ ಪ್ರಕಾಶ್, ಧನಂಜಯ್ ಇತರೆ ಪಾತ್ರಗಳಲ್ಲಿದ್ದಾರೆ.


Share