, ಮೈಸೂರು-ವಿಂಟೇಜ್ ಕಾರ್ ರ್ಯಾಲಿಯ ಮೂಲಕ ಮತದಾನ ಜಾಗೃತಿ, ವೀಕ್ಷಿಸಿ

188
Share

ಇಂದು ಮೈಸೂರು ನಗರದಲ್ಲಿ ವಿಂಟೇಜ್ ಕಾರ್ ರ್ಯಾಲಿಯ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು

ಮೈಸೂರು ಏ.06- ಮತದಾರರಲ್ಲಿ ಚುನಾವಣಾ ಅರಿವು ಮೂಡಿಸಲು ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿಯ ವತಿಯಿಂದ ಪುರಭವನ(ಟೌನ್ ಹಾಲ್)ದಿಂದ ದೇವರಾಜ್ ಅರಸು ರಸ್ತೆ, ಸಯ್ಯಾಜಿರಾವ್ ರಸ್ತೆಯ ಮೂಲಕ ಪುರಭವನದವರೆಗೆ ವಿಂಟೇಜ್ ಕಾರ್ ರ್ಯಾಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ ಅವರು ಮಾತನಾಡಿ, 70 ರಿಂದ 75 ವರ್ಷಗಳ ಇತಿಹಾಸವಿರುವ ಈ ಚುನಾವಣೆ ಮತ್ತು ವಿಂಟೇಜ್ ಕಾರ್ ಅನ್ನು ಹೋಲಿಸಿದರೆ ಪ್ರತಿವರ್ಷವೂ ಅದರ ಮಹತ್ವ ಹಾಗೂ ಛಾಪು ಹೆಚ್ಚಾಗುತ್ತಲೇ ಇದೆ ಎಂದರು.

ಪ್ರಜೆಗಳೆಲ್ಲರೂ ಪ್ರಜಾಪ್ರಭುತ್ವ ಮತ್ತು ಚುನಾವಣೆಯ ಯಜಮಾನರು. ಇದನ್ನು ಹೆಚ್ಚಿನ ಜಾಗರೂಕತೆಯಿಂದ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿರುತ್ತದೆ. ಹಾಗಾಗಿ ಪ್ರತಿಭರಿಯೂ ಚುನಾವಣಾ ಹಬ್ಬದ ಮೆರಗನ್ನು ಹೆಚ್ಚಿಸಲು ಎಲ್ಲರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ತಿಳಿಸಿದರು.

ಪ್ರತಿಯೊಬ್ಬ ಮತದಾರನು ಈ ದೇಶದ ಹಾಗೂ ಪ್ರಜಾಪ್ರಭುತ್ವದ ಆಸ್ತಿ. ಮತದಾರರು ಯಾವುದೇ ರೀತಿಯ ಚುನಾವಣಾ ಅಕ್ರಮವನ್ನು ಮಾಡದೆ ನೈತಿಕ ಮತದಾನವನ್ನು ಮಾಡಿ ಬೇರೆಯವರಿಗೂ ನೈತಿಕ ಮತದಾನ ಮಾಡುವಂತೆ ಅರಿವು ಮೂಡಿಸಬೇಕು ಎಂದರು.

ಕಳೆದ 2018 ರ ಚುನಾವಣೆಯಲ್ಲಿ ಮೈಸೂರಿನಲ್ಲಿ ಶೇ.70 ರಷ್ಟು ಮತದಾನವಾಗಿದ್ದು, ಈ ಬಾರಿ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ವತಿಯಿಂದ ಫ್ಲಾಶ್ ಮಾಬ್, ರ್ಯಾಲಿ ಸೇರಿದಂತೆ ಮಾಲ್, ಅಪಾರ್ಟ್ಮೆಂಟ್ ಹೀಗೆ ನಗರದಾಧ್ಯಂತ ಹಲವಾರು ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸಿ ನಗರ ಪ್ರದೇಶದ ಮತದಾರರು ಹಾಗೂ ಯುವಜನರನ್ನು ಸೆಳೆಯಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಎಷ್ಟೋ ಜನರು ಅಕ್ಷರಸ್ಥರಾಗಿದ್ದರು ಸಹ ಮತದಾನದ ವಿಷಯದಲ್ಲಿ ಪ್ರಜ್ಞಾವಂತರಾಗಿರುವುದಿಲ್ಲ ಅಂತಹವರಿಗೂ ಸಹ ಜಾಗೃತಿಯನ್ನು ಮೂಡಿಸುವ ಕಾರ್ಯಕ್ರಮವನ್ನು ಸ್ವೀಪ್ ಸಮಿತಿ ಮಾಡುತ್ತಿದೆ. ಹಾಗಾಗಿ ಪ್ರತಿಯೊಬ್ಬರೂ ಮತದಾನದ ಮಹತ್ವವನ್ನು ಅರಿತು ಕಡ್ಡಾಯವಾಗಿ ಮತ ಹಾಕಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರಾದ ಕೆ ಎಂ ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯಾದ ಸೀಮಾ ಲಾಟ್ಕರ್, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಎನ್ ಎನ್ ಮಧು ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.


Share