ವಿಶೇಷ ಚೇತನ ಮತದಾರರಿಗೂ ಬಂತು APP ಸೌಲಭ್ಯ

102
Share

 

*ವಿಶೇಷ ಚೇತನ ಮತದಾರರಿಗೂ ಬಂತು APP ಸೌಲಭ್ಯ*

ಮೈಸೂರು ಮಾ.26. ವಿಶೇಷಚೇತನ ಮತದಾರರು ಮುಕ್ತ, ಸುಗಮ ರೀತಿಯಲ್ಲಿ ಮತದಾನ ಮಾಡಲು ಭಾರತ ಚುನಾವಣಾ ಆಯೋಗವು ಇದೇ ಮೊದಲ ಬಾರಿಗೆ ಸಕ್ಷಮ್ ಅಪ್ (SAKSHAM APP) ಅನ್ನು ಪರಿಚಯಿಸಿದೆ. ಮತದಾರರ ಪಟ್ಟಿಯಲ್ಲಿರುವ ವಿಶೇಷಚೇತನರು ಈ APP ನ್ನು ಬಳಕೆ ಮಾಡಿ ಚುನಾವಣೆಗೆ ಸಂಬಂಧಪಟ್ಟಂತೆ ಎಲ್ಲಾ ಮಾಹಿತಿಗಳನ್ನು ಪಡೆಯಬಹುದಾಗಿದೆ.

ಈ APP ನಲ್ಲಿ ಮತದಾರರಾಗಿ ಹೊಸದಾಗಿ ನೋಂದಣಿ ಮಾಡುವುದು, ಮತಗಟ್ಟೆಯಲ್ಲಿ ಲಭ್ಯವಿರುವ ಸೌಲಭ್ಯಗಳ ಮಾಹಿತಿ ಪಡೆಯುವುದು, ಮತಗಟ್ಟೆಗೆ ತೆರಳಲು ತ್ರಿಚಕ್ರವಾಹನವನ್ನು ಮುಂಗಡವಾಗಿ ಕಾಯ್ದಿರಿಸುವುದು, ದೂರನ್ನು ದಾಖಲಿಸುವುದು ಮತ್ತು ಭಾರತ ಚುನಾವಣಾ ಆಯೋಗವು ಹೊರತಂದಿರುವ ಎಲ್ಲಾ ಚುನಾವಣಾ ಲೇಖನಗಳು ಹಾಗೂ ಸಂದೇಶಗಳನ್ನು ನೋಡಬಹುದಾಗಿರುತ್ತದೆ.
ಈ APP ನ್ನು ಬಳಕೆ ಮಾಡಿ ಚುನಾವಣೆ ವೇಳೆ ವಿಶೇಷಚೇತನ ಮತದಾರರು ತ್ರಿಚಕ್ರವಾಹನವನ್ನು ಮುಂಗಡವಾಗಿ ಕಾಯ್ದಿರಿಸಿ ಮತಗಟ್ಟೆಗೆ ತೆರಳಬಹುದಾಗಿರುತ್ತದೆ.

ಮತಗಟ್ಟೆಯು ವಿಶೇಷ ಚೇತನ ಸ್ನೇಹಿ ಉಪ ಕ್ರಮಗಳಾದ ನೆಲ ಅಂತಸ್ತಿನಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಿರುವುದು, ರ್ಯಾಂಪ್ ವ್ಯವಸ್ಥೆ ಕಲ್ಪಿಸಿರುವುದು, ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಿರುವುದು, ದೃಷ್ಠಿದೋಷವುಳ್ಳವರಿಗೆ ಬ್ರೈಲ್ ಲಿಪಿಯಲ್ಲಿ ಮಾದರಿ ಮತ ಪತ್ರವನ್ನು ಮುದ್ರಿಸಿ ಪ್ರದರ್ಶಿಸಿರುವುದು, ಮತಗಟ್ಟೆಯಲ್ಲಿ ಸಹಾಯ ಮಾಡಲು ಸ್ವಯಂ ಸೇವಕರ ನೇಮಕ, ಕುಡಿಯುವ ನೀರಿನ ವ್ಯವಸ್ಥೆ, ನೆರಳಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ತ್ರಿಚಕ್ರವಾಹನ ವ್ಯವಸ್ಥೆ, ಪ್ರತ್ಯೇಕ ಸರತಿ ಸಾಲು ವ್ಯವಸ್ಥೆ, ಕಲ್ಪಿಸಿರುವುದರ ಬಗ್ಗೆ APP ಮೂಲಕ ಮಾಹಿತಿಯನ್ನು ಪಡೆದು ಮತಗಟ್ಟೆಯಲ್ಲಿ ಆರಾಮದಾಯಕವಾಗಿ ಬಂದು ಮತದಾನ ಮಾಡಬಹುದಾಗಿರುತ್ತದೆ.

ಈ APP ಮೂಲಕ ತಮ್ಮ ಭಾವಚಿತ್ರವುಳ್ಳ ಮತದಾರರ ಚೀಟಿಯ ಸಂಖ್ಯೆಯನ್ನು ಬಳಕೆ ಮಾಡಿ ತಮ್ಮ ಮತಗಟ್ಟೆ ಯಾವುದು ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ. ಮುಂದುವರೆದು ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ದೂರು ಇದ್ದಲ್ಲಿ ದಾಖಲಿಸಬಹುದಾಗಿರುತ್ತದೆ. ಭಾರತ ಚುನಾವಣಾ ಆಯೋಗ ಹೊರತಂದಿರುವ ಎಲ್ಲಾ ಮಾರ್ಗಸೂಚಿಗಳು, ಸಂದೇಶಗಳು ಇ.ವಿ.ಎಂ ಹಾಗೂ ವಿ.ವಿ.ಪ್ಯಾಟ್ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ. ಈ ಎಲ್ಲಾ ಸೌಲಭ್ಯಗಳನ್ನು ಚುನಾವಣಾ ಆಯೋಗವು ಒದಗಿಸಿರುವುದರಿಂದ ವಿಶೇಷ ಚೇತನ ಮತದಾರರು ಸಂತೋಷದಿಂದ ನಿರ್ಭೀತರಾಗಿ, ಆರಾಮದಾಯಕವಾಗಿ ತಮ್ಮ ಮತಗಟ್ಟೆಗೆ ಬಂದು ಮತ ಚಲಾಯಿಸಿಬೇಕೆಂದು ಅಧ್ಯಕ್ಷರು ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಕ ಅಧಿಕಾರಿಗಳಾದ ಕೆ.ಎಂ.ಗಾಯಿತ್ರಿ ಅವರು ತಿಳಿಸಿದ್ದಾರೆ.


Share