ಶ್ರೀ ಆಂಜನೇಯ ಚರಿತ್ರೆ ಭಾಗ – 1 : ಪುಟ – 63
ಓಂ ನಮೋ ಹನುಮತೇ ನಮಃ
493) ಹನುಮಂತನಿಗೆ ಅಳುಬರುವಂತಾಯಿತು. ಒಂದು ಮೂಲೆಗೆ ಹೋಗಿ ಕುಳಿತ. ತೀವ್ರವಾಗಿ ಆಲೋಚನೆ ಮಾಡುತ್ತಿದ್ದಾನೆ. ಅವನ ಆಲೋಚನೆಗಳು ಪರಿಪರಿಯಾಗಿದ್ದವು.
1. ಸಂಪಾತಿಯೇನೋ ಸೀತೆ ಇಲ್ಲೇ ಇರುತ್ತಾಳೆ ಎಂದು ಹೇಳಿದ್ದ. ಊರೆಲ್ಲಾ ಹುಡುಕಾಡಿದ್ದೇನೆ. ರಾವಣನ ಮನೆಯಲ್ಲೂ ಮೂರುಸಾರಿ ಹುಡುಕಿದ್ದೇನೆ. ಎಲ್ಲಿ ಸೀತೆ?
2. ಬಹುಶಃ ಅವಳು ಬಗ್ಗಲಿಲ್ಲ ಎಂದು ರಾವಣ ಅವಳನ್ನು ನುಂಗಿ ಹಾಕಿರಬಹುದು.
3. ಅಥವಾ ಅವನ ಹೆಂಡತಿಯರ ಪೈಕಿ ಯಾರೋ ಒಬ್ಬರು ಅಸೂಯೆಯಿಂದ ಅವಳನ್ನು ನುಂಗಿ ಬಿಟ್ಟಿರಬೇಕು.
4. ಅಥವಾ ಅವಳೇ ಆತ್ಮಹತ್ಯೆ ಮಾಡಿಕೊಂಡಿರಬಹುದು
5. ರಾವಣ ಅವಳನ್ನು ಬಲವಂತವಾಗಿ ಎಳೆದುಕೊಂಡುಬರುತ್ತಿರುವಾಗ ದಾರಿಯಲ್ಲೇ ಕೆಳಗೆ ಬಿದ್ದು ಸತ್ತುಹೋಗಿರಬಹುದು.
6. ಅಥವಾ ಸಮುದ್ರದ ಮೇಲಿಂದ ಹಾರುವಾಗ ಆ ಅಗಾಧ ಸಮುದ್ರವನ್ನು ನೋಡಿ ಅವಳ ಹೃದಯವೇ ನಿಂತುಹೋಗಿರಬಹುದು.
7. ಅಥವಾ ರಥದಲ್ಲಿ ಬರುವಾಗ ಇವಳು ತಪ್ಪಿಸಿಕೊಳ್ಳುವುದು, ಅವನು ಗಟ್ಟಿಯಾಗಿ ಹಿಡಿದುಕೊಳ್ಳುವುದು –
ಈ ಗಲಾಟೆಯಲ್ಲಿ ಅವನಿಗೇ ಗೊತ್ತಿಲ್ಲದಂತೆ ಅವಳು ಸತ್ತುಹೋದಳೇನೋ.
8. ಆದರೂ, ಅವಳು ಸತ್ತುಹೋಗಿದ್ದಾಳೆಂದು ಏಕೆ ಅಂದುಕೊಳ್ಳಬೇಕು? ತನ್ನ ಮನೆಯಲ್ಲಲ್ಲದೇ ಊರಲ್ಲೇ ಇನ್ನೆಲ್ಲೋ ಯಾವ ನೆಲಮಾಳಿಗೆಯಲ್ಲೋ ಅವಳನ್ನು ಬಚ್ಚಿಟ್ಟಿರಬಹುದು. ನಾನು ಆ ಸ್ಥಳವನ್ನು ಗುರ್ತಿಸಲಾಗದೇ ಹೋದನೇನೋ!
9. ಇನ್ನೇನು ಗುರ್ತಿಸುವುದು! ಸಂಪಾತಿಯ ಮಾತು ಕೇಳಿಕೊಂಡು, ಛಂಗನೆ ಹಾರಿ, ಇನ್ನೇನು ನನಗೆ ಕೀರ್ತಿ ಕಿರೀಟಗಳು ಸಿಕ್ಕೇ ಬಿಟ್ಟಿತು ಎಂದುಕೊಂಡು ಇಡೀ ರಾತ್ರಿ ಹುಡುಕಾಡಿದೆ. ಕೀರ್ತಿಯೂ ಇಲ್ಲ. ಕಿರೀಟ ಮೊದಲೇ ಇಲ್ಲ.
10. ಇದೇ ಎಷ್ಟೋ ಮೇಲು.
ಆ ಸಂಪಾತಿಯ ಮಾತನ್ನು ಕೇಳಿಕೊಂಡು ಆತುರ ಪಟ್ಟು ರಾಮಲಕ್ಷ್ಮಣರನ್ನೂ ಕರೆದುಕೊಂಡು ಬಂದಿದ್ದರೆ, ಇಲ್ಲಿ ಸೀತೆ ಕಾಣಿಸದೇ ಹೋಗಿದ್ದಕ್ಕೆ ಅವರಿಬ್ಬರಿಗೂ ಎದೆಯೊಡೆದು ಹೋಗುತ್ತಿತ್ತು.
11. ಅವರ ಪ್ರಾಣವೇ ಹೋದರೆ, ಅತ್ತ ಅಯೋಧ್ಯೆಯೂ ನಾಶವಾಗುತ್ತದೆ, ಇತ್ತ ಕಿಷ್ಕಿಂಧೆಯೂ ನಾಶವಾಗುತ್ತದೆ.
12. ಅವರು ಯಾಕೆ ನಾಶವಾಗಬೇಕು? ನಾನೇ ನಾಶವಾಗಿ ಹೋದರೆ ಹೇಗೆ? ಆದ್ದರಿಂದ ಇಲ್ಲೇ ಒಂದು ಕಡೆ ವಾನಪ್ರಸ್ಥನಾಗಿ ಜೀವಿಸಿಕೊಂಡಿರುತ್ತೇನೆ.
13. ಅದಕ್ಕಿಂತ ಸಮುದ್ರದಲ್ಲಿ ಬಿದ್ದು ಸಾಯುವುದು ಮೇಲು.
14. ಅದೇನು ಕರ್ಮ! ಈ ಪಾಪಿ ರಾವಣನನ್ನು ಕೊಂದುಹಾಕಿ ಹಗೆಯಾದರೂ ತೀರಿಸಿಕೊಳ್ಳುತ್ತೇನೆ.
15. ಹಾಗಲ್ಲ. ಹಕ್ಕಿಯನ್ನು ಹಿಡಿದುಕೊಂಡಂತೆ ಅವನನ್ನು ಸೆರೆ ಹಿಡಿದು, ರಾಮ ಪ್ರಭುವಿನ ಪಾದಗಳ ಮುಂದೆ ಹಾಕಬೇಕು. ಅವನು ಹಗೆ ತೀರಿಸಿಕೊಳ್ಳಬೇಕು.
16. ಏನೀ ಹುಚ್ಚು ಆಲೋಚನೆಗಳು! ಮನಸ್ಸೇನೋ ಓಡುತ್ತದೆ ಅಂದರೆ ಹಾಗೆ ಓಡಲು ಬಿಡುವುದೇ? ಸತ್ತರೆ ಏನು ಬರುತ್ತದೆ? ಸಾಯಿಸಿದರೆ ಏನು ಬರುತ್ತದೆ? ಕೆಲಸವನ್ನು ಸಾಧಿಸಬೇಕು. ಸಾಧಿಸಬೇಕಾದರೆ ಬದುಕಿರಬೇಕು. “ಜೀವನ್ ಭದ್ರಾಣಿ
ಪಶ್ಯತಿ”.
17. ಆದ್ದರಿಂದ ಕರ್ತವ್ಯದ ಬಗ್ಗೆ ಯೋಚಿಸೋಣ.
18. ಈಗಲೇ ಊರಿನಲ್ಲಿ ನೂರಕ್ಕೆ ತೊಂಭತ್ತು ಭಾಗ ಜಾಲಾಡಿದ್ದಾಗಿದೆ. ಇನ್ನು ಯಾವ ಮೂಲೆಯಲ್ಲಾದರೂ ನನ್ನ ಕಣ್ಣಿಗೆ ಬೀಳದ ಪ್ರದೇಶಗಳಿವೆಯೇನೋ ನೋಡೋಣ.
19. ಅಂಥಾ ಪ್ರದೇಶ ಯಾವುದಾದರೂ ಇದ್ದರೆ ಅಲ್ಲಿ ಹುಡುಕೋಣ.
( ಮುಂದುವರೆಯುವುದು )
* ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
* ಸಂಗ್ರಹ
ಭಾಲರಾ
ಬೆಂಗಳೂರು